ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಪರೀಕ್ಷಾ ಪೆ ಚರ್ಚಾ ಸಂವಾದಕ್ಕೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಾರಿವಾಳ ಗ್ರಾಮದ ಬಾಲಕಿ ಆಯ್ಕೆಯಾಗಿದ್ದಾಳೆ.
ಜಂಬಲದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆಗಿರುವ ತಾರಿವಾಳ ಗ್ರಾಮದ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ದೆಹಲಿಯಲ್ಲಿ ಪ್ರಧಾನಿ ಮೋದಿ ಜೊತೆ ನಡೆಯಲಿರುವ ಸಂವಾದಕ್ಕೆ ಸೆಲೆಕ್ಟ್ ಆಗಿದ್ದಾಳೆ.
ಆನ್ ಲೈನ್ ನಲ್ಲಿ ಪೂರ್ಣಿಮಾ ಎಕ್ಸಾಮಿಂಗ್ ಎಕ್ಸಾಂ ವಿಷಯದ ಬಗ್ಗೆ ಪೂರ್ಣಿಮಾ ಪ್ರಬಂಧ ಬರೆದಿದ್ದಳು. ಇದೀಗ ಪ್ರಧಾನಿ ಮೋದಿ ಅವರ ಜೊತೆ ಜನವರಿ 20ರಂದು ದೆಹಲಿಯಲ್ಲಿ ನಡೆಯುವ ಸಂವಾದಕ್ಕೆ ಆಯ್ಕೆಯಾಗಿದ್ದಾಳೆ. ಈ ಮೂಲಕ ಚಿಕ್ಕ ಗ್ರಾಮದ ಸರ್ಕಾರಿ ಶಾಲೆಯ ಬಾಲಕಿ ಪ್ರಧಾನಿ ಜೊತೆ ಸಂವಾದದಲ್ಲಿ ಭಾಗವಹಿಸುವ ಅವಕಾಶ ದೊರೆತಂತಾಗಿದೆ.
ಜನವರಿ 16 ರಂದು ವರದಿ ಮಾಡಿಕೊಳ್ಳುವಂತೆ ಕರ್ನಾಟಕ ಸಮಗ್ರ ಶಿಕ್ಷಣ ಅಧಿಕಾರಿ ಬಾಲಕಿ ಶಾಲೆಯ ಮುಖ್ಯಗುರುಗಳಿಗೆ ಮಾಹಿತಿ ರವಾನಿಸಿದ್ದಾರೆ. ಬಾಲಕಿ ಬಗ್ಗೆ ಮಾಹಿತಿ ತುಂಬಿ ಇ-ಮೇಲ್ ಮಾಡುವಂತೆ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಜೊತೆ ಸಂವಾದದಲ್ಲಿ ಭಾಗವಹಿಸುತ್ತಿರುವ ಪೂರ್ಣಿಮಾ ಪೋಷಕರು, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿ ಹರ್ಷ ಉಂಟು ಮಾಡಿದೆ.