ಮಾವನನ್ನ ಕೊಲೆಗೈದು, ದೇಹವನ್ನು ಗೋಣಿಚೀಲದಲ್ಲಿ ಠಾಣೆಗೆ ತಂದ ಸೊಸೆ

Public TV
1 Min Read

– ಬಿಡಿಸಿಕೊಳ್ಳಲು ಹೋಗಿ ಹೆಣವಾದ ಅತ್ತೆ

ಬಾಗಲಕೋಟೆ: ಸೊಸೆಯೊಬ್ಬಳು ಕಬ್ಬಿಣದ ರಾಡ್‍ನಿಂದ ಮಾವ ಹಾಗೂ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.

ಜಮಖಂಡಿ ತಾಲೂಕಿನ ಜಂಬಗಿ ಕೆ.ಡಿ. ಗ್ರಾಮದ ಸಿದ್ದರಾಯ ಮಲ್ಲೇಶನವರ (58) ಹಾಗೂ ಕಲಾವತಿ (45) ಕೊಲೆಯಾದ ಅತ್ತೆ, ಮಾವ. ಗೀತಾ ಮಲ್ಲೇಶನವರ ಕೊಲೆ ಮಾಡಿರುವ ಆರೋಪಿ ಸೊಸೆ. ಗೀತಾ ಗುರುವಾರ ಮಧ್ಯಾಹ್ನ ಕೃತ್ಯ ಎಸಗಿದ್ದಾಳೆ.

ಮಾವ ಸಿದ್ದರಾಯ ಕಳೆದ ಕೆಲವು ದಿನಗಳಿಂದ ಸೊಸೆ ಗೀತಾಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಗೀತಾ ಇಂದು ಮಾವನ ಜೊತೆಗೆ ಜಗಳಕ್ಕೆ ಮುಂದಾಗಿದ್ದಳು. ಈ ವೇಳೆ ಇಬ್ಬರ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ಮಾಡಿದ್ದಾರೆ. ಈ ವೇಳೆ ಗೀತಾ ಕಬ್ಬಿಣದ ರಾಡ್‍ನಿಂದ ಮಾವ ಸಿದ್ದರಾಯನ ತಲೆಗೆ ಹೊಡೆದಿದ್ದಾಳೆ. ಹಲ್ಲೆಯನ್ನು ತಡೆಯಲು ಬಂದ ಅತ್ತೆ ಕಲಾವತಿ ತಲೆಗೂ ರಾಡ್‍ನಿಂದ ತಲೆಗೆ ಹೊಡೆದಿದ್ದಾಳೆ.

ಗಂಭೀರವಾಗಿ ಗಾಯಗೊಂಡಿದ್ದ ಸಿದ್ದರಾಯ ಹಾಗೂ ಕಲಾವತಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಪಲ್ಪ ಸಮಯದ ಬಳಿಕ ಗೀತಾ ಮಾವನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಪತಿ ಗುರುಪಾದ ಜೊತೆಗೆ ಸಾವಳಗಿ ಪೊಲೀಸ್ ಠಾಣೆಗೆ ಹೋಗಿದ್ದಾಳೆ.

ಮಾವ ಸಿದ್ದರಾಯನಿಗೆ ಇಬ್ಬರು ಹೆಂಡತಿಯರು. ನಾನು ಸಿದ್ದರಾಯನ ಮೊದಲ ಹೆಂಡತಿಯ ಮಗ ಗುರುಪಾದ ಪತ್ನಿ. ನಮ್ಮ ಅತ್ತೆ ಸಾವನ್ನಪ್ಪಿದ ಬಳಿಕ ಮಾವ ಎರಡನೇ ಮದುವೆಯಾಗಿದ್ದು, ಅವರೊಂದಿಗೆ ಇದ್ದಾನೆ. ನಾನು ಹಾಗೂ ಪತಿ ಸಮೀಪ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆದರೆ ಮಾವ ಆಗಾಗ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಹೀಗಾಗಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ಗೀತಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಾವಳಗಿ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಗೀತಾ, ಪತಿ ಗುರುಪಾದ ಹಾಗೂ ಬಸಗೊಂಡನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *