ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಫ್ಯಾನ್ಸ್ (Darshan Fans) ವಿರುದ್ಧ ಸ್ಯಾಂಡಲ್ವುಡ್ ಕ್ವೀನ್, ನಟಿ ರಮ್ಯಾ (Ramya) ಗರಂ ಆಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕಳುಹಿಸುತ್ತಿರುವ ಅಶ್ಲೀಲ ಮೆಸೇಜ್ಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ರಮ್ಯಾ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ ನಟಿ ರಮ್ಯಾ. ಈ ಆಕ್ರೋಶ ಅತಿರೇಕಕ್ಕೆ ಹೋದ ಕಾರಣದಿಂದಾಗಿ ನಟಿ ರಮ್ಯಾ ಕೂಡ ದರ್ಶನ್ ಫ್ಯಾನ್ಸ್ನ ಮುಖವಾಡ ಕಳಚುತ್ತಿದ್ದಾರೆ. ತಮಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ದರ್ಶನ್ ಫ್ಯಾನ್ಸ್ ಹೆಸರಿನ ಸೋಷಿಯಲ್ ಮೀಡಿಯಾ ಅಕೌಂಟ್ಗಳ ಸ್ಕ್ರೀನ್ಶಾಟ್ ತೆಗೆದು, ಅಪ್ಲೋಡ್ ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಆ ಎಲ್ಲಾ ಸ್ಕ್ರೀನ್ಶಾಟ್ ಅನ್ನು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡಾಮಂಡಲರಾಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರೋ ಮೋಹಕತಾರೆ, ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕಚಿಕ್ಕ ಮಕ್ಕಳ ಬಗ್ಗೆ ಕೆಟ್ಟಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಶ್ಲೀಲ ಕಮೆಂಟ್ ಅಕೌಂಟ್ಗಳನ್ನು ಬಹಿರಂಗ ಪಡಿಸಿದ ರಮ್ಯಾ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. `ರೇಣುಕಾಸ್ವಾಮಿ ಹಾಗೂ ಡಿಬಾಸ್ ಫ್ಯಾನ್ಸ್ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀದ್ವೇಷ ಮನೋಭಾವದವರು. ಇಂಥವರಿಂದಲೇ ಹೆಣ್ಣು ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’ ಅಂತ ಡಿ ಬಾಸ್ ಫ್ಯಾನ್ಸ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ ರಮ್ಯಾ. `ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಾಮೆಂಟ್ಗಳು ಸಾಕ್ಷಿ. ನಿಮ್ಮ ಮಸೇಜ್ಗಳಿಂದ ನಿಮ್ಮ ಯೋಗ್ಯತೆ ಇಷ್ಟರಲ್ಲೇ ಗೊತ್ತಾಗುತ್ತೆ’ ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.