ಕೊಹ್ಲಿ ಆಯ್ಕೆ ಮಾಡಿದ್ದಕ್ಕೆ ನನ್ನ ಉದ್ಯೋಗ ಹೋಯ್ತು: ವೆಂಗ್‍ಸರ್ಕರ್

Public TV
2 Min Read

ನವದೆಹಲಿ: ಎಸ್ ಬದರಿನಾಥ್ ಬದಲು ವಿರಾಟ್ ಕೊಹ್ಲಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿ ನಾನು ವೃತ್ತಿಜೀವನನ್ನು ತ್ಯಾಗ ಮಾಡಬೇಕಾಯಿತು ಎಂಬ ಸ್ಫೋಟಕ ಮಾಹಿತಿಯನ್ನು ಟೀಂ ಇಂಡಿಯಾ ಮಾಜಿ ನಾಯಕ, ಮಾಜಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ದಿಲೀಪ್ ವೆಂಗ್ ಸರ್ಕರ್ ಬಿಚ್ಚಿಟ್ಟಿದ್ದಾರೆ.

ಮುಂಬೈ ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿದ ಅವರು, 2008 ರಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ವೇಳೆ ವಿರಾಟ್ ಕೊಹ್ಲಿ ರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದೆ. ಆದರೆ ಈ ವೇಳೆ ಬಿಸಿಸಿಐ ಖಜಾಂಚಿಯಾಗಿದ್ದ ಶ್ರೀನಿವಾಸ್ ಅವರು ತಮ್ಮ ಮಾಲೀಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ತಮಿಳುನಾಡು ಆಟಗಾರರ ಎಸ್ ಬದರಿನಾಥ್ ಅವರನ್ನು ಆಯ್ಕೆ ಮಾಡಲು ಮನಸ್ಸು ಮಾಡಿದ್ದರು ಎಂದು ಹೇಳಿದ್ದಾರೆ.

2008 ಅಂಡರ್ 19 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಆಯೋಜನೆಯಾಗಿತ್ತು. ಈ ಸರಣಿಗೆ ಶ್ರೀನಿವಾಸ್ ಅವರು 29 ವರ್ಷದ ಬದರಿನಾಥ್ ಅವರನ್ನು ಆಯ್ಕೆ ಮಾಡಲು ಇಚ್ಛಿಸಿದ್ದರು. ಆದರೆ ನಾನು 19 ವರ್ಷದ ಕೊಹ್ಲಿ ರನ್ನು ಆಯ್ಕೆ ಮಾಡಿದೆ. ಬಳಿಕ ನನಗೆ ಕರೆ ಮಾಡಿದ್ದ ಶ್ರೀನಿವಾಸ್ ಅವರು ಈ ಆಯ್ಕೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದರು. ಇದಾದ ಬಳಿಕ ನಾನು ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ಕಳೆದು ಕೊಳ್ಳಬೇಕಾಯಿತು ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಅಂದು ನಾನು ಕೊಹ್ಲಿ ಅವರಿಗೆ ಅವಕಾಶ ನೀಡದೆ ಹೋಗಿದ್ದರೆ ಮತ್ತೆ ಅವರಿಗೆ ಅವಕಾಶ ಸಿಗುತಿತ್ತೋ ಗೊತ್ತಿಲ್ಲ. ಆದರೆ ಅಂದು ನಾನು ಕೊಹ್ಲಿ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದೆ. ನನ್ನ ನಿರ್ಧಾರ ಅಂದು ಟೀಂ ಇಂಡಿಯಾ ನಾಯಕರಾಗಿದ್ದ ಧೋನಿ ಹಾಗೂ ಕೋಚ್ ಆಗಿದ್ದ ಗ್ಯಾರಿ ಕಸ್ಟರ್ನ್ ಅವರಿಗೂ ಸಹಮತವಿರಲಿಲ್ಲ. ಆದರೆ ನನ್ನ ಅಭಿಪ್ರಾಯಕ್ಕೆ ಆಯ್ಕೆ ಸಮಿತಿಯ ಸಹಮತವಿತ್ತು. ಆದರೆ ಮರುದಿನ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಕೈ ಬಿಟ್ಟು ಶ್ರೀಕಾಂತ್ ರನ್ನು ನೇಮಕ ಮಾಡಿದ್ದರು ಎಂದು ಹೇಳಿದರು.  ಇದನ್ನೂ ಓದಿ:  ಧೋನಿಗಿಂತಲೂ ಹೆಚ್ಚು ಸಂಬಳ ಪಡೆಯಲಿದ್ದಾರೆ ಭುವಿ! ಯಾರಿಗೆ ಎಷ್ಟು ಸಂಬಳ? ಇಲ್ಲಿದೆ ಪೂರ್ಣ ಪಟ್ಟಿ

61 ವರ್ಷದ ವೆಂಗ್ ಸರ್ಕರ್ ಟೀಂ ಇಂಡಿಯಾ ಪರ 116 ಟೆಸ್ಟ್, 129 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 1983ರ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು. 2006 ರಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಧೋನಿಯನ್ನು ಹಾಡಿ ಹೊಗಳಿದ ಸೌರವ್ ಗಂಗೂಲಿ

Share This Article
Leave a Comment

Leave a Reply

Your email address will not be published. Required fields are marked *