ಜಯನಗರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಮಗು ಕಳ್ಳತನ..!

Public TV
1 Min Read

ಬೆಂಗಳೂರು: ನಗರದಲ್ಲಿರೋ ವಾಣಿವಿಲಾಸ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿರುವ ಘಟನೆಗಳು ನಡೆಯುತ್ತಿರೋ ಬೆನ್ನಲ್ಲೇ ಇದೀಗ ನಗರದಲ್ಲಿ ಮತ್ತೊಂದು ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಹೌದು. ಹಾಸನ ಮೂಲದ ತ್ಯಾಗರಾಜ್ ಪತ್ನಿ ಸಹನಾ ಜನವರಿ 28 ರಂದು ಹೆರಿಗೆಗೆ ಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹನಾ ಅವರು ಜನವರಿ 29 ರಂದು ಗಂಡು ಮತ್ತು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿಗೆ ಜಾಂಡಿಸ್ ಇದ್ದ ಕಾರಣ ಐಸಿಯುವಿನಲ್ಲಿ ಇಟ್ಟು ಪ್ರತಿ 2 ಘಂಟೆಗೆ ಒಮ್ಮೆ ಮಗುವಿಗೆ ತಾಯಿ ಹಾಲು ಕುಡಿಸಲು ಮಗುವನ್ನ ತಾಯಿಗೆ ನೀಡುತ್ತಿದ್ರು. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಆ ಮುದ್ದು ಕಂದಮ್ಮನಿಗೆ ತಾಯಿಯಿಂದ ಹಾಲು ಕುಡಿಸಿ ಐಸಿಯುಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಅಪಹರಣ ಮಾಡಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ತಿಲಕ ನಗರ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ್ದಾರೆ. ಮೂವರು ದಾದಿಯರು ಮಗುವನ್ನ ಬೇರೆ ಯಾರಿಗೋ ಹಸ್ತಂತರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಆಸ್ಪತ್ರೆಯ ಮೂವರು ನರ್ಸ್‍ಗಳಾದ ತಿಪ್ಪಮ್ಮ, ರಾಧ, ನಳಿನಾಕ್ಷಿ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇವರು ಕಳೆದ ಒಂದು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ನರ್ಸ್‍ಗಳಾಗಿ ಕೆಲಸ ಮಾಡುತ್ತಿದ್ದು, ಹಣದ ಆಸೆಗೆ ನವಜಾತ ಶಿಶುವನ್ನ ಅಪಹರಿಸಿ ಬೇರೆಯವರಿಗೆ ಕೊಟ್ಟಿದ್ದಾರೆ ಎಂಬ ಅನುಮಾನವೂ ಹೆಚ್ಚಗಿದೆ. ಬೇಲಿನೇ ಎದ್ದು ಹೊಲ ಮೇಯ್ದಂತೆ ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಲಿನ ಸಿಬ್ಬಂದಿಯಿಂದಲೇ ನವಜಾತ ಶಿಶುವಿನ ಅಪಹರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *