ಬೆಂಗಳೂರು: ಪೈಪ್ ಲೈನ್ ಗುಂಡಿಗೆ ಬಿದ್ದಿದ್ದ ಮರಿಯಾನೆಯನ್ನು ಬೆಂಗಳೂರು ಹೊರವಲಯ ಆನೇಕಲ್ ಬಳಿ ರಕ್ಷಣೆ ಮಾಡಲಾಗಿದೆ.
ಭಾನುವಾರ ರಾತ್ರಿ ಆನೇಕಲ್ ಗಡಿಗೆ ಹೊಂದಿಕೊಂಡಿರುವ ಹೊಸೂರು ಸಮೀಪದ ನಾಯಕನಪಲ್ಲಿಗೆ ಆಹಾರ ಅರಸಿ ಕಾಡಾನೆ ಹಿಂಡು ಬಂದಿದ್ದವು. ಆಗ ಆನೆಗಳ ಹಿಂಡಿನಲ್ಲಿದ್ದ ಸುಮಾರು 3 ವರ್ಷದ ಆನೆ ಕತ್ತಲಲ್ಲಿ ಪೈಪ್ ಲೈನ್ ಗುಂಡಿಗೆ ಸಿಲುಕಿಕೊಂಡಿದೆ.
ಮರಿಯಾನೆ ಪೈಪ್ ಲೈನ್ ಗುಂಡಿಯಲ್ಲಿ ಸಿಲುಕಿ ಘೀಳಿಟ್ಟಿದ್ದು, ಮುಂಜಾನೆ ಗ್ರಾಮಸ್ಥರು ಬಂದು ನೋಡಿದ್ದಾರೆ. ನಂತರ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಮರಿಯಾನೆಯನ್ನು ರಕ್ಷಿಸಿದ್ದಾರೆ.
ಬೇಸಿಗೆ ಪ್ರಾರಂಭದಲ್ಲಿ ಆನೆಗಳು ಮತ್ತೆ ನಾಡಿನಲ್ಲಿ ಪ್ರತ್ಯಕ್ಷವಾಗುತ್ತಿವೆ. ಇದರಿಂದ ಗ್ರಾಮಸ್ಥರು ಹೊಲ ತೋಟಗಳತ್ತ ತೆರಳಲು ಹೆದರುತ್ತಿರುವ ಪರಿಸ್ಥಿತಿ ಎದುರಾಗಿದೆ.