ಶೆಡ್‍ನಲ್ಲಿ ನಡೀತಿದೆ ಬಿಟೆಕ್ ಕಾಲೇಜು- ವಿದ್ಯಾರ್ಥಿಗಳಿಗೆ ಉಗ್ರಾಣವೇ ವಸತಿ ನಿಲಯ

Public TV
1 Min Read

– ಈ ಕಾಲೇಜಿನ ಬಗ್ಗೆ ಕ್ಯಾರೆ ಅಂತಿಲ್ಲ ದೋಸ್ತಿ ಸರ್ಕಾರ

ಹಾವೇರಿ: ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಅಂತ ಬಿಟೆಕ್ ಕಾಲೇಜು ಮಂಜೂರು ಮಾಡಿದೆ. ಆದ್ರೆ ಹಾವೇರಿ ತಾಲೂಕು ದೇವಿಹೊಸೂರು ಗ್ರಾಮದ ಬಳಿ ಇರೋ ಬಿಟೆಕ್ ಕಾಲೇಜ್‍ನಲ್ಲಿ ವಿದ್ಯಾರ್ಥಿಗಳು ತಗಡಿನ ಶೆಡ್‍ನಲ್ಲಿ ಕುಳಿತು ಪಾಠ ಕೇಳಿ ಅಲ್ಲಿಯೇ ಪರೀಕ್ಷೆ ಬರೆಯುವ ಪರಿಸ್ಥಿತಿ ಬಂದಿದೆ.

ದೇವಿಹೊಸೂರು ಗ್ರಾಮದ ಬಳಿ ಇರೋ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಕಾಲೇಜ್‍ನಲ್ಲಿ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು ಇಲ್ಲ. ಹೌದು, ಕಳೆದ ಮೂರು ವರ್ಷಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಗ್ರಾಮಕ್ಕೆ ಬಿಟೆಕ್ ಕಾಲೇಜು ಮಂಜೂರು ಮಾಡಿದೆ. ಆದ್ರೆ ಇಲ್ಲಿ ಸರಿಯಾದ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕಾಲೇಜು ವಿದ್ಯಾರ್ಥಿಗಳು ರಣ ಬೇಸಿಗೆಯಲ್ಲಿ ತಗಡಿನ ಶೆಡ್‍ನಲ್ಲಿ ಕುಳಿತು ಪರೀಕ್ಷೆ ಬರುತ್ತಿದ್ದಾರೆ. ಸದ್ಯ ನಾಲ್ಕು ಮತ್ತು ಆರನೇ ಸೆಮಿಸ್ಟರ್ ಪರೀಕ್ಷೆಯನ್ನ 42 ವಿದ್ಯಾರ್ಥಿಗಳು ಬರೆಯುತ್ತಿದ್ದಾರೆ. ಕೇವಲ ಪಾಠದ ಕೊಠಡಿ ಕೊರತೆಯಷ್ಟೇ ಅಲ್ಲ ವಸತಿ ನಿಲಯವೂ ಸರಿಯಾಗಿ ಇಲ್ಲ. ಈ ಕಾಲೇಜು ವಿದ್ಯಾರ್ಥಿಗಳಿಗೆ ಉಗ್ರಾಣವೇ ವಸತಿ ನಿಲಯವಾಗಿದೆ. ಈವರೆಗೆ ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿದ್ದ ತರಗತಿಗಳು ಈಗ ದೇವಿಹೊಸುರು ಬಿಟೆಕ್ ಕಾಲೇಜ್‍ನಲ್ಲಿ ನಡೆಯುತ್ತಿದೆ. ಈ ಕಾಲೇಜಿಗೆ ಸರ್ಕಾರ ಐದು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಆದ್ರೆ ಹೆಚ್ಚಿನ ಪ್ರಮಾಣದ ಅನುದಾನ ಬಿಡುಗಡೆ ಮಾಡಿದರೆ ನಮ್ಮ ವಿದ್ಯಾರ್ಥಿಗಳಿಗೆ ಬೋಧನಾ ಕೊಠಡಿ ಹಾಗೂ ವಸತಿ ನಿಲಯ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರಕ್ಕೆ ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಕಾಲೇಜಿನ ಪ್ರಾಚಾರ್ಯರು ಹೇಳಿದ್ದಾರೆ.

ಅಲ್ಲದೆ ಈ ಬಗ್ಗೆ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿಯವರನ್ನು ಕೇಳಿದರೇ ನಾನು ಸಹ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಆದ್ರೆ ಮೈತ್ರಿ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಆದಷ್ಟು ಬೇಗ ಸರ್ಕಾರ ಬಿಟೆಕ್ ಕಾಲೇಜ್‍ಗೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *