ಬಿಎಸ್‍ವೈ ಸರ್ಕಾರದಿಂದ ಮತ್ತೊಂದು ಆದೇಶ-ಕಟ್ಟಡ ನಿರ್ಮಾಣ ಕೆಲಸವಿಲ್ಲ, ಯಥಾಸ್ಥಿತಿ ಮುಂದುವರಿಕೆ

Public TV
2 Min Read

-ಐಟಿ ಸಂಸ್ಥೆಗಳ ಸಿಬ್ಬಂದಿಗೆ ಬಿಎಂಟಿಸಿ ಬಸ್
-ಸರ್ಕಾರಿ ಇಲಾಖೆಗಳ ಪ್ರಾರಂಭಕ್ಕೆ ಆದೇಶ

ಬೆಂಗಳೂರು: ಆರು ಗಂಟೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಮತ್ತೊಂದು ಆದೇಶವನ್ನು ಹೊರಡಿಸಿದೆ. ಏಪ್ರಿಲ್ 20ರ ನಂತರ ಬೈಕ್ ಸಂಚಾರಕ್ಕೆ ಅವಕಾಶ ನೀಡಿದ್ದ ಆದೇಶವನ್ನು ವಾಪಸ್ ಪಡೆದಿದ್ದ ಸರ್ಕಾರ, ಇದೀಗ ಕಟ್ಟಡ ಕಾಮಗಾರಿಗೂ ಬ್ರೇಕ್ ನೀಡಿದೆ.

ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿಗಳು, ಲಾಕ್‍ಡೌನ್ ನಿಯಮಗಳ್ನು ಭಾಗಶಃ ಸಡಿಲಿಕೆಗೆ ಮುಂದಾಗಿತ್ತು. ಏಪ್ರಿಲ್ 20ರ ನಂತ್ರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ್ದು ವ್ಯಾಪಕ ಟೀಕೆಗೆ ತುತ್ತಾಗಿತ್ತು. ಪಬ್ಲಿಕ್ ಟಿವಿ ಸಹ ನಿರ್ಧಾರ ವಿರೋಧಿಸಿ ಆಂದೋಲನ ಆರಂಭಿಸಿತ್ತು. ಪಬ್ಲಿಕ್ ಟಿವಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಸಾರ್ವಜನಿಕರು ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದರು. ಇಷ್ಟು ದಿನ ಮನೆಯಲ್ಲಿದ್ದೇವೆ, ಇನ್ನೊಂದು ವಾರ ಹೆಚ್ಚೇನು ಇಲ್ಲ. ದಾರಿಯಲ್ಲಿರುವ ಕೊರೊನಾ ಮನೆಗೆ ಕರೆ ತರುವ ಈ ನಿರ್ಧಾರ ಸರಿಯಲ್ಲ ಎಂದು ಮನೆಯೇ ಮಂತ್ರಾಲಯದ ಕಾರ್ಯಕ್ರಮದಲ್ಲಿ ಹೇಳಿದ್ದರು.

ಅದೇ ರೀತಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಒಂದು ಎಂದು ಪರಿಗಣಿಸಿ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಈ ನಿರ್ಧಾರ ಹಸಿರು ವಲಯದಲ್ಲಿರುವ ರಾಮನಗರದ ಜನತೆಯ ಕಂಗೆಣ್ಣಿಗೆ ಗುರಿಯಾಗಿತ್ತು. ರಾಮನಗರ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ಒಂದು ವೇಳೆ ಸಡಿಲಿಕೆ ನೀಡಿದ್ರೆ, ಪಕ್ಕದ ಜಿಲ್ಲೆಗಳ ಸೋಂಕಿತರು ಬಂದ್ರೆ ಹೇಗೆ ಎಂಬ ಆತಂಕದಲ್ಲಿದ್ದರು. ಹೀಗಾಗಿ ಈ ಆದೇಶವನ್ನು ಸರ್ಕಾರ ಹಿಂಪಡೆದಿದೆ.

ಬಿಎಂಟಿಸಿ ಬಸ್: ಐಟಿ ಸಂಸ್ಥೆಗಳು ಬಿಎಂಟಿಸಿ ಬಸ್ ಗಳನ್ನು ಒಪ್ಪಂದದ ಆಧಾರದ ಮೇಲೆ ಸರ್ಕಾರ ನೀಡುತ್ತದೆ. ಒಂದು ಬಸ್ ನಲ್ಲಿ ಶೇ 30ರಿಂದ 40ರಷ್ಟು ಜನರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಬಸ್ ನಲ್ಲಿ ಪ್ರಯಾಣಿಸುವ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ಸರ್ಕಾರಿ ಇಲಾಖೆಗಳ ಪ್ರಾರಂಭಕ್ಕೆ ಆದೇಶ: ಏಪ್ರಿಲ್ 20ರ ನಂತರ ಸರ್ಕಾರದ 18 ಇಲಾಖೆಗಳ ಸಿಬ್ಬಂದಿ ಮತ್ತು ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಹಾಜರಾಗುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶಿಸಿದ್ದಾರೆ. 18 ಇಲಾಖೆ ಹೊರತುಪಡಿಸಿ ಉಳಿದ ಇಲಾಖೆ, ನಿಗಮ ಮಂಡಳಿಗಳಲ್ಲಿ ಶೇಕಡಾ 33 ಸಿಬ್ಬಂದಿ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ.

ಕೆಲಸ ನಿರ್ವಹಿಸಬೇಕಾದ ಇಲಾಖೆಗಳು: ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ, ಒಡಾಳಿತ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಆರ್ಥಿಕ ಇಲಾಖೆ(ಎಲ್ಲಾ ಖಜಾನೆಗಳು ಸೇರಿದಂತೆ), ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ.

ಸಿಲಿಕಾನ್ ಸಿಟಿಯಲ್ಲಿ 35 ಕೊರೊನಾ ಹಾಟ್‍ಸ್ಪಾಟ್‍ಗಳು: ಬೆಂಗಳೂರಿನಲ್ಲಿ ಕೊರೊನಾ ಹಾಟ್‍ಸ್ಪಾಟ್ ವಾರ್ಡ್ ಗಳ ಸಂಖ್ಯೆ 32 ರಿಂದ 35ಕ್ಕೆ ಏರಿಕೆಯಾಗಿದೆ. ಹೊಯ್ಸಳ ನಗರ, ನ್ಯೂ ತಿಪ್ಪಸಂದ್ರ ,ರಾಜಮಹಲ್ ಮೂರು ಹೊಸ ವಾರ್ಡ್ ಗಳು ಕೊರೊನಾ ಹಾಟ್‍ಸ್ಪಾಟ್ ನಲ್ಲಿ ಸೇರ್ಪಡೆಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *