ನಾನು ಯಾರಿಗೂ ಭಾರವಾಗಿರಬಾರದು, ಕಷ್ಟ ಕೊಡಲ್ಲ- ಡೆತ್ ನೋಟ್ ಬರೆದಿಟ್ಟು ಬಿಕಾಂ ವಿದ್ಯಾರ್ಥಿನಿ ನೇಣಿಗೆ ಶರಣು

Public TV
1 Min Read

ಮಡಿಕೇರಿ: ಡೆತ್ ನೋಟ್ ಬರೆದಿಟ್ಟು ಬಿಕಾಂ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.

ಪಟ್ಟಣದ ಶಾಂತಿನಗರದ ಶ್ರೀನಿವಾಸ್ ಹಾಗೂ ವಿಜಯ ದಂಪತಿಯ ಪುತ್ರಿ ಶಾಲಿನಿ(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಯಾರೂ ಇಲ್ಲದ ವೇಳೆ ಮನೆಯ ಕೊಠಡಿಯಲ್ಲಿ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಶಾಲಿನಿ ವಿರಾಜಪೇಟೆಯ ಕಾವೇರಿ ಕಾಲೇಜಿನ ಎರಡನೇ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಆಕೆ ಆತ್ಮಹತ್ಯೆಗೂ ಮುನ್ನ ಡೆತ್ ನೊಟ್ ಬರೆದಿಟ್ಟಿದ್ದು, ಅದರಲ್ಲಿ ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ. ನನಗೆ ಬದುಕಲು ಇಷ್ಟವಿರಲಿಲ್ಲ. ನಾನು ಯಾರಿಗೂ ಭಾರವಾಗಿರಬಾರದು ಮತ್ತು ಕಷ್ಟವನ್ನು ಕೊಡುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ. ಐ ಲವ್ ಯು ಅಮ್ಮ ಎಂದು ಬರೆದಿದ್ದಾಳೆ.

ಇನ್ನು ಈ ಬಗ್ಗೆ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಶಾಲಿನಿ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇನ್ನೂ ತಂದೆ-ತಾಯಿ ದಾಂಪತ್ಯ ಕಲಹದಿಂದ ದೂರವಿದ್ದು ಕಳೆದ ಕೆಲವು ವರ್ಷಗಳಿಂದ ಅಮ್ಮ, ಅಕ್ಕ ಹಾಗೂ ತಮ್ಮನೊಂದಿಗೆ ಮೃತ ಶಾಲಿನಿ ವಿರಾಜಪೇಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.

Share This Article
Leave a Comment

Leave a Reply

Your email address will not be published. Required fields are marked *