ರಾಮ ಮಂದಿರ ನಿರ್ಮಾಣಕ್ಕೆ 5 ವರ್ಷ ಬೇಕು

Public TV
3 Min Read

– 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
– ಅಡಿಪಾಯಕ್ಕೆ 8 ತಿಂಗಳು ಸಮಯ ಬೇಕು

ನವದೆಹಲಿ: ರಾಮಮಂದಿರ ನಿರ್ಮಾಣ ಸಂಬಂಧ ತಯಾರಿ ಕೆಲಸಗಳು ನಡೆಯುತ್ತಿದ್ದರೂ ದೇವಾಲಯ ಸ್ಥಾಪನೆಗೆ ಕನಿಷ್ಟ 5 ವರ್ಷಗಳು ಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

ರಾಮಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ಕಂಬಗಳನ್ನು ಸಿದ್ಧ ಪಡಿಸಲಾಗಿದೆ. ಸುಮಾರು 250 ಪರಿಣಿತ ಕುಶಲಕರ್ಮಿಗಳು ಈ ದೇವಾಲಯವನ್ನು ಪೂರ್ಣಗೊಳಿಸಲು ದಣಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ತಯಾರಿಸಿರುವ ವಿನ್ಯಾಸದಂತೆ ದೇವಸ್ಥಾನವನ್ನು ನಿರ್ಮಿಸಬೇಕಿದೆ ಎಂದು ದೇವಾಲಯ ಕಟ್ಟಡದ ಮೇಲ್ವಿಚಾರಕರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

ಪ್ರಖ್ಯಾತ ಶಿಲ್ಪಿ ರಜನಿಕಾಂತ್ ಸೊಂಪುರ ನಿಧನರಾದ ಕಾರಣ ವಿಶ್ವ ಹಿಂದೂ ಪರಿಷತ್ ಕಾರ್ಯಶಾಲೆಯಲ್ಲಿ ಪ್ರಸ್ತುತ ಯಾವುದೇ ಕುಶಲ ಶಿಲ್ಪಿಗಳಿಲ್ಲ. 50 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದ್ದು ವಿಎಚ್‍ಪಿ ಕಾರ್ಯಶಾಲೆಯಲ್ಲಿ 1990ರಿಂದ ಪ್ರತಿ ದಿನ ಎಂಟು ಗಂಟೆಗಳ ಕಾಲ ಕೆಲಸ ನಡೆಯುತ್ತಿದೆ. ಆದರೆ ಮೂರು ದಶಕಗಳಲ್ಲಿ ನೆಲ ಮಹಡಿಯ ರಚನೆಯ ಅರ್ಧದಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

ಸರಯು ನದಿ ತೀರದಲ್ಲಿ ಇರುವ ಕಾರಣ ಭದ್ರವಾದ ಅಡಿಪಾಯ ಹಾಕಬೇಕಾಗುತ್ತದೆ. ನಂತರ ಸಂಪೂರ್ಣ ರಚನೆಯ ಮೇಲೆ ಬಿಳಿ ಸಿಮೆಂಟ್ ಹಾಕಬೇಕಾಗುತ್ತದೆ. ಅಡಿಪಾಯಕ್ಕೆ 8 ತಿಂಗಳು ಸಮಯ ತಗಲಬಹುದು ಎನ್ನುವ ಲೆಕ್ಕಾಚಾರ ಹಾಕಲಾಗಿದೆ

ನಿರ್ಮಿಸಬೇಕಾದ ಒಟ್ಟು 212 ಸ್ತಂಭಗಳ ಪೈಕಿ ಪ್ರಸ್ತುತ 106 ಸ್ತಂಭಗಳು ಮಾತ್ರ ಸಿದ್ಧವಾಗಿವೆ. ಅಯೋಧ್ಯೆಯ ದೇವಸ್ಥಾನದ ಕಾರ್ಯಾಗಾರದಲ್ಲಿ ಇವುಗಳನ್ನು ಜೋಡಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಯಾವುದೇ ಕಾರ್ಮಿಕರಿಲ್ಲ. ಮತ್ತೆ ಕೆಲಸ ಪ್ರಾರಂಭವಾಗಬೇಕಿದೆ. ಇದಕ್ಕಾಗಿ 250 ಕೆತ್ತನೆಗಾರರ ಅವಶ್ಯವಿದೆ. ಇಷ್ಟು ಜನ ಕೆತ್ತನೆಗಾರರು ಕೆಲಸ ಮಾಡಿದರೂ ಐದು ವರ್ಷಗಳು ಬೇಕಾಗುತ್ತದೆ ಎಂದು ದೇವಾಲಯದ ಕಾರ್ಯಾಗಾರದ ಮೇಲ್ವಿಚಾರಕ ಅನ್ನೋಭಾಯ್ ಸೊಂಪುರ ವಿವರಿಸಿದರು. ಇದನ್ನೂ ಓದಿ: ಅಯೋಧ್ಯೆ ಕೇಸ್ – 92 ವರ್ಷದ ‘ತರುಣ’ ವಕೀಲನ ಸಾಧನೆಗೆ ಪ್ರಶಂಸೆಯ ಸುರಿಮಳೆ

ಅನ್ನೋಭಾಯ್ ಪ್ರತಿಕ್ರಿಯಿಸಿ, ಇದೀಗ ಅರ್ಧ ಸ್ತಂಭಗಳು ಸಿದ್ಧವಾಗಿವೆ, ಗರ್ಭಗುಡಿಯ ಗೋಡೆಗಳನ್ನು ನಿರ್ಮಿಸಲಾಗಿದೆ ಹಾಗೂ ದೇವಸ್ಥಾನಕ್ಕೆ ಅಮೃತ ಶಿಲೆಯ ‘ಚೌಕತ್’ ನಿರ್ಮಾಣ ಕಾರ್ಯ ಸಹ ಪೂರ್ಣಗೊಂಡಿದೆ. ಆದರೆ ಶೇ.50ರಷ್ಟು ಕಾಮಗಾರಿಗಳು ಇನ್ನೂ ಪೂರ್ಣವಾಗಿಲ್ಲ. ಇನ್ನೂ 106 ಸ್ತಂಭಗಳು, ಶಿಖರ ಹಾಗೂ ಮೇಲ್ಛಾವಣಿಯನ್ನು ನಿರ್ಮಿಸಬೇಕಾಗಿದೆ. ಈಗ ನಾನು ಮದುವೆಗಾಗಿ ಗುಜರಾತ್‍ಗೆ ಬಂದಿದ್ದೇನೆ ಆದರೆ ಕೆತ್ತನೆಗಾರರು ನನ್ನನ್ನು ಕರೆಯಲು ಪ್ರಾರಂಭಿಸಿದ್ದಾರೆ. ಡಿಸೆಂಬರ್‍ನಲ್ಲಿ ಅಯೋಧ್ಯೆಗೆ ಮರಳಿದ ನಂತರ ಹೆಚ್ಚಿನ ವಿಷಯಗಳು ತಿಳಿಯುತ್ತವೆ ಎಂದು ಅವರು ಮಾಹಿತಿ ನೀಡಿದರು.

ವಿಎಚ್‍ಪಿಯ ಅವಧ್ ಪ್ರಾಂತ್ಯದ ಮುಖ್ಯಸ್ಥ ಶರದ್ ಶರ್ಮಾ ಈ ಕುರಿತು ಮಾಹಿತಿ ನೀಡಿ, ಮುಂದೆ ಹೇಗೆ ತೆಗೆದುಕೊಂಡು ಹೋಗುವುದು ಎಂದು ಇನ್ನೂ ನಿರ್ಧರಿಸಿಲ್ಲ. ರಾಮ ಜನ್ಮಭೂಮಿಯ ನ್ಯಾಸ್ ಸದಸ್ಯರು ಸಭೆ ನಡೆಸಿ ನಂತರ ನಿರ್ಧರಿಸಲಿದ್ದಾರೆ. ಇದೀಗ ನಮ್ಮ ಗಮನವು ದೇಶದಲ್ಲಿ ಶಾಂತಿ ನೆಲೆಸುವುದರ ಮೇಲಿದೆ. 1984ರಲ್ಲಿ ವಿಎಚ್‍ಪಿಯಿಂದ ದೇವಾಲಯದ ಶಿಲಾನ್ಯಾಸ ನೆರವೇರಿಸಲಾಗಿದೆ. ಆಗ ಭಕ್ತರಿಂದ ಒಂದು ರೂಪಾಯಿ ಮತ್ತು ಇಪ್ಪತ್ತೈದು ಪೈಸೆಗಳ ಪ್ರಾಥಮಿಕ ದೇಣಿಗೆ ನಂತರ, ಮಂದಿರ ನಿರ್ಮಾಣಕ್ಕಾಗಿ ಒಟ್ಟು 8 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿಸಿದರು.

ಪ್ರಾರಂಭದಲ್ಲಿ ರಾಜಸ್ಥಾನದಿಂದ ಬರುವ ಕಲ್ಲುಗಳಿಂದ ಕೆಲಸ ಪ್ರಾರಂಭಿಸಲಾಯಿತು. ಆಗ 150 ಕಾರ್ವರ್ ಗಳ ಜೊತೆಗೆ ನೂರಾರು ಕಾರ್ಮಿಕರಿದ್ದರು. ಆಗ ಹಣದ ಹರಿವು ಕೂಡ ಸ್ಥಿರವಾಗಿತ್ತು. ಮೊದಲ 10 ವರ್ಷಗಳಲ್ಲಿ ಕೆಲಸವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಯಿತು. ಕಾಲಾನಂತರದಲ್ಲಿ ವೇಗವು ನಿಧಾನವಾಯಿತು. ಕುಶಲಕರ್ಮಿಗಳು ಹಾಗೂ ಕಾರ್ಮಿಕರ ಸಂಖ್ಯೆ ಕ್ಷೀಣಿಸಿತು, ಇದೀಗ ಮತ್ತೆ ಕೆಲಸಕ್ಕೆ ವೇಗ ಸಿಗಬೇಕಿದೆ ಎಂದು ಶರ್ಮಾ ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *