ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

Public TV
5 Min Read

ಅಯೋಧ್ಯೆ (ರಾಮಮಂದಿರ): ಜನವರಿ 22 ರಂದು ಅಯೋಧ್ಯೆಯ (Ayodhya Ram Mandir) ರಾಮಮಂದಿರದಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾಪನೆ’ ಮಹೋತ್ಸವ ಜರುಗಲಿದೆ. ಈಗಾಗಲೇ ರಾಮಮಂದಿರದ ಗರ್ಭಗುಡಿಯಲ್ಲಿ ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ವಿರಾಜಮಾನವಾಗಿದೆ. ಬಾಲರಾಮನ ಪೂರ್ಣ ಭಂಗಿಯ ವಿಗ್ರಹದ ಫೋಟೋ ಎಲ್ಲೆಡೆ ವೈರಲ್‌ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ (Ram Lalla Idol) ವಿಗ್ರಹದ ದಿವ್ಯ ದರ್ಶನವೇ ಆಗಿದೆ. ‘ಜೈ ಶ್ರೀರಾಮ್‌’ ಘೋಷಣೆ ಮೊಳಗುತ್ತಿದೆ.

ರಾಮಲಲ್ಲಾ ವಿಗ್ರಹದ ಫೋಟೋ ವೈರಲ್‌
ಶುಕ್ರವಾರ ಬೆಳಗ್ಗೆ ನಿಂತ ಭಂಗಿಯಲ್ಲಿರುವ ರಾಮಲಲ್ಲಾ ವಿಗ್ರಹದ ಮೊದಲ ಫೋಟೋವನ್ನು ಹಂಚಿಕೊಳ್ಳಲಾಯಿತು. ವಿಗ್ರಹವನ್ನು ಬಿಳಿವಸ್ತ್ರದಿಂದ ಮುಚ್ಚಲಾಗಿತ್ತು. ನಂತರ ಕಣ್ಣಿಗಷ್ಟೇ ಬಟ್ಟೆ ಕಟ್ಟಿರುವ ರಾಮಲಲ್ಲಾ ವಿಗ್ರಹದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದವು. ಈಗ ಹಲವು ವಿಶೇಷತೆ ಹೊಂದಿರುವ ಪೂರ್ಣ ವಿಗ್ರಹದ ಚಿತ್ರಗಳು ವೈರಲ್‌ ಆಗುತ್ತಿವೆ. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು..?

ಫೇಸ್‌ಬುಕ್‌, ಎಕ್ಸ್‌ ಖಾತೆ, ವಾಟ್ಸಪ್‌ ಸ್ಟೇಟಸ್‌ನಲ್ಲಿ ಮಿಂಚು
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರಾಮಲಲ್ಲಾ ವಿಗ್ರಹದ ಫೋಟೋಗಳು ರಾರಾಜಿಸುತ್ತಿವೆ. ರಾಜಕೀಯ ನಾಯಕರು, ರಾಮಭಕ್ತರ ಫೇಸ್‌ಬುಕ್‌, ಎಕ್ಸ್‌ ಖಾತೆಗಳು ಹಾಗೂ ವಾಟ್ಸಪ್‌ ಸ್ಟೇಟಸ್‌ಗಳಲ್ಲೂ ಬಾಲರಾಮ ಮಿಂಚುತ್ತಿದ್ದಾನೆ. ಎಲ್ಲರೂ ‘ಜೈ ಶ್ರೀರಾಮ್‌’ ಘೋಷವಾಕ್ಯವನ್ನು ಚಿತ್ರದೊಂದಿಗೆ ಹಂಚಿಕೊಂಡಿದ್ದಾರೆ.

ದಶಕಗಳ ಕನಸು ಈಗ ನನಸಾಗಿದೆ. ಪ್ರಭು ರಾಮಲಲ್ಲಾ ಅವರ ಮೊದಲ ನೋಟ. ಜೈ ಶ್ರೀ ರಾಮ್ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ರಾಮಲಲ್ಲಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್‌

ಶ್ರೀರಾಮ ಜಯ ರಾಮ ಜಯ ಜಯ ರಾಮ! ಲಕ್ಷಾಂತರ ಜನರ ಆಕಾಂಕ್ಷೆಗಳು, ಶತಮಾನಗಳ ಹಂಬಲ, ಅಂತಿಮವಾಗಿ ಪ್ರಭು ರಾಮಲಲ್ಲಾ ಅವರ ದಿವ್ಯ ದರ್ಶನ! ಜೈ ಶ್ರೀ ರಾಮ್ ಎಂದು ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅವರು ಎಕ್ಸ್‌ ಖಾತೆ ಬರೆದುಕೊಂಡಿದ್ದಾರೆ.

ನಾವು 500 ವರ್ಷಗಳಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಮುಂದಿನ 50 ಗಂಟೆಗಳು 500 ವರ್ಷಗಳಂತೆ ಗೋಚರವಾಗುತ್ತಿದೆ. ಈ ಧಾರ್ಮಿಕ ಉತ್ಸಾಹ ಮತ್ತು ಜೀವಮಾನದ ಘಟನೆಯನ್ನು ವೀಕ್ಷಿಸಲು ನಮ್ಮ ಪೀಳಿಗೆಯು ಅತ್ಯಂತ ಅದೃಷ್ಟಶಾಲಿ ಮತ್ತು ಧನ್ಯವಾಗಿದೆ ಎಂದು ರಾಮಭಕ್ತರು ಬರೆದುಕೊಂಡು ವಿಗ್ರಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos

ರಾಮಲಲ್ಲಾ ವಿಗ್ರಹದ ವಿಶೇಷತೆಯೇನು?
51 ಇಂಚು ಎತ್ತರವಿರುವ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿಯು ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದೆ. ಬಾಲರಾಮನ ಹಣೆಯ ಮೇಲೆ ತಿಲಕವಿದೆ. ಬಾಲರಾಮ‌ನ ಮೂರ್ತಿಯ ಮೇಲ್ಭಾಗ ಸೂರ್ಯ ವಂಶದ ಶ್ರೀರಾಮಚಂದ್ರನನ್ನು ಬಿಂಬಿಸುವಂತಹ ಸೂರ್ಯದೇವರ ಕೆತ್ತನೆ ಮಾಡಲಾಗಿದೆ. ಬಾಲರಾಮನ ಮೂರ್ತಿ ಚಂದ್ರನ ನಾಚಿಸುವಷ್ಟು ಕಾಂತಿ ಅದ್ಭುತ ಕಳೆಯಲ್ಲಿದೆ. ಬಾಲರಾಮನ ಕಿರೀಟದ ಮೇಲೆ ನರಸಿಂಹ ದೇವರ ಕೆತ್ತನೆ ಇದೆ. ದಶವತಾರ ಬಿಂಬಿಸುವ ಮತ್ಸ್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ಬ್ರಹ್ಮ, ಓಂ, ಆದಿಶೇಷ, ಚಕ್ರ ಹಾಗೂ ಈಶ್ವರ ಕೆತ್ತನೆಯು ವಿಗ್ರಹದ ಪ್ರಭಾವಳಿ ಬಲಭಾಗದಲ್ಲಿದೆ. ಇನ್ನು ವಿಗ್ರಹದ ಎಡಭಾಗದ ಪ್ರಭಾವಳಿಯಲ್ಲಿ ಮೇಲ್ಗಡೆ ಶಂಕ, ಗಧೆ, ಸ್ವಸ್ತಿಕ್‌, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕ್ಲಕಿ, ಹಾಗೂ ನೆತ್ತಿನ ಮೇಲೆ ಸೂರ್ಯನಿದ್ದಾನೆ.

 

View this post on Instagram

 

A post shared by Sandalwood Times (@sandalwood_times)

ಗರ್ಭಗುಡಿಯಲ್ಲಿ ರಾಮಲಲ್ಲಾ ವಿರಾಜಮಾನ
ಈಗಾಗಲೇ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮಹೋತ್ಸವದ ಪೂರ್ವಭಾವಿ ವಿಧಿವಿಧಾನಗಳು ನಡೆಯುತ್ತಿವೆ. ರಾಮಲಲ್ಲಾ ವಿಗ್ರಹವನ್ನು ಬುಧವಾರ ರಾಮಮಂದಿರಕ್ಕೆ ತರಲಾಯಿತು. ದೇಶದ ನದಿಗಳ ನೀರಿನಿಂದ ವಿಗ್ರಹಕ್ಕೆ ಪವಿತ್ರ ಸ್ನಾನ ಮಾಡಿಸಲಾಯಿತು. ಜೊತೆಗೆ ಔಷಧೀಯ ಗುಣಗಳಿರುವ ಸಸ್ಯಗಳನ್ನು ನೆನೆಸಿರುವ ನೀರಿನಿಂದ ಸ್ವಚ್ಛಗೊಳಿಸಲಾಯಿತು. ಇದನ್ನೂ ಓದಿ: Ayodhya Ram Mandir: ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ

ಗುರುವಾರ ರಾಮಮಂದಿರದ ಗರ್ಭಗುಡಿಯಲ್ಲಿ ‘ಗಣೇಶ ಪೂಜೆ’ ಮತ್ತು ‘ವರುಣ ಪೂಜೆ’ ನೆರವೇರಿಸಲಾಯಿತು. ನಂತರ ವಿಗ್ರಹವನ್ನು ಗರ್ಭಗುಡಿಯಲ್ಲಿ ವಿರಾಜಮಾನ ಮಾಡಲಾಯಿತು.

Share This Article