ಮುಂಗುಸಿಗೆ ಆಹಾರವಾಗ್ತಿದ್ದ ನಾಗರಹಾವನ್ನು ರಕ್ಷಿಸಿದ ಆಟೋ ಚಾಲಕ

Public TV
1 Min Read

ಮಡಿಕೇರಿ: ಮುಂಗುಸಿಗೆ ಆಹಾರವಾಗ್ತಿದ್ದ ನಾಗರಹಾವನ್ನು ಸತತ ಎರಡು ಗಂಟೆ ಕಾದು ಕುಳಿತು ರಕ್ಷಣೆ ಮಾಡಿದ ಅಪರೂಪದ ಘಟನೆ ಮಡಿಕೇರಿಯ ರಾಜಾಸೀಟ್ ಬಳಿ ನಡೆದಿದೆ.

ನಗರದ ಆಟೋ ಚಾಲಕ ಈರಪ್ಪ ಎಂಬವರು ಆಟೋದಲ್ಲಿ ಹೋಗುವಾಗ ನಾಗರಹಾವನ್ನು ಮುಂಗುಸಿವೊಂದು ಕಚ್ಚುತ್ತಿರುವುದನ್ನು ನೋಡಿ, ಕೂಡಲೇ ಆಟೋದಿಂದ ಕೆಳಗೆ ಇಳಿದಿದ್ದಾರೆ. ಆ ಬಳಿಕ ಮುಂಗುಸಿಯನ್ನು ಓಡಿಸಿ, ನೋವಿನಿಂದ ಬಳಲುತ್ತಿದ್ದ ನಾಗರಹಾವಿನ ರಕ್ಷಣೆಗೆ ಮುಂದಾಗಿದ್ದಾರೆ.

ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದರಿಂದ ವಾಹನ ಸವಾರರಿಗೂ ಎಚ್ಚರಿಸಿ, ನಾಗರಹಾವಿಗೂ ತೊಂದರೆಯಾಗದಂತೆ ಸುಮಾರು ಎರಡು ಗಂಟೆ ಕಾಲ ಕಾದು ಕುಳಿತಿದ್ದಾರೆ. ಆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದರೂ ನಾಗರಹಾವನ್ನು ಹಿಡಿಯಲು ವಿಫಲರಾದರು.

ಒಂದು ಕಡೆ ಮುಂಗುಸಿಯಿಂದ ತಪ್ಪಿಸಿಕೊಂಡ ನಾಗರಹಾವು, ಆ ಬಳಿಕ ತನ್ನ ಫೋಟೋವನ್ನು ತೆಗೆದುಕೊಳ್ಳಲು ಮುಂದಾದ ಜನರಿಂದ ತಪ್ಪಿಸಿಕೊಳ್ಳಲು ಹರಸಾಹಸಪಡಬೇಕಾಗಿ ಬಂತು. ಕೊನೆಗೂ ತೀವ್ರ ನೋವಿನಿಂದ ನರಳಾಡುತ್ತಿದ್ದ ನಾಗರಾಜ, ಬದುಕಿ ಬಿಟ್ಟಿತ್ತು ಬಡಜೀವ ಎನ್ನುವ ಹಾಗೆ, ಮರಳಿ ಪೊದೆಯನ್ನು ಸೇರಿಕೊಂಡು ನಿಟ್ಟುಸಿರು ಬಿಟ್ಟಿತ್ತು.

ಪ್ರವಾಸಿ ತಾಣ ರಾಜಾಸೀಟ್‍ಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಬರುವುದು ಸಾಮಾನ್ಯ. ಆದರೆ ಬುಧವಾರ ನಾಗರಾಜನ ಎಂಟ್ರಿಯಿಂದ ಎಲ್ಲರ ಒಂದು ಕ್ಷಣ ತಬ್ಬಿಬ್ಬು ಆದರು.

https://www.youtube.com/watch?v=ZZgbazS1myI

Share This Article
Leave a Comment

Leave a Reply

Your email address will not be published. Required fields are marked *