ಸವಾರರನ್ನು ಹಿಡಿಯಲು ಹೋದ ಪೊಲೀಸರು- ಆಟೋ, ಬೈಕ್ ನಡುವೆ ಡಿಕ್ಕಿ

Public TV
1 Min Read

ಮಂಗಳೂರು: ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಹಿಡಿಯಲು ಹೋಗಿ ಆಟೋ ಹಾಗೂ ಬೈಕ್ ನಡುವೆ ಅಪಘಾತಕ್ಕೆ ಪೊಲೀಸರೇ ಕಾರಣರಾಗಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ವಾಗ್ದಾದ ನಡೆದ ಘಟನೆ ಬಿ.ಸಿ ರೋಡ್ ನಲ್ಲಿ ನಡೆದಿದೆ.

ಬಿ.ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಪೊಲೀಸರು ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು.

ಈ ಸಂದರ್ಭದಲ್ಲಿ ಬೈಕ್ ಒಂದನ್ನು ನಿಲ್ಲಿಸುವ ಭರದಲ್ಲಿ ಬೈಕ್ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಆಟೋದಲ್ಲಿದ್ದ ಇಬ್ಬರು ಮಹಿಳೆಯರಿಗೆ ಹಾಗೂ ಬೈಕ್ ಸವಾರನಿಗೆ ಗಾಯಗಳಾಗಿದೆ. ಇದರಿಂದ ಕೆರಳಿದ ಸಾರ್ವಜನಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಸದ್ಯ ಬಂಟ್ವಾಳ ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಸೇರಿದ್ದ ಸಾರ್ವಜನಿಕರನ್ನು ಚದುರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *