ಔರಂಗಜೇಬ್ ಹೆಸರು, ಪಠ್ಯವನ್ನು ತೆಗೆಯಿರಿ- ಶಿರೋಮಣಿ ಅಕಾಲಿದಳ ಒತ್ತಾಯ

Public TV
1 Min Read

ನವದೆಹಲಿ: ರಾಜ್ಯದಲ್ಲಿ ಬಿಜೆಪಿ ಟಿಪ್ಪು ಪಠ್ಯವನ್ನು ತೆಗೆಯುವಂತೆ ಒತ್ತಾಯಿಸಿದ ನಂತರ ಇದೀಗ ಮೊಘಲ್ ದೊರೆ ಔರಂಗಜೇಬನ ಹೆಸರನ್ನು ಸಹ ತೆಗೆದು ಹಾಕಬೇಕು ಎಂದು ಶಿರೋಮಣಿ ಅಕಾಲಿ ದಳ ಒತ್ತಾಯಿಸಿದೆ.

ದೆಹಲಿಯ ಔರಂಗಜೇಬ್ ರಸ್ತೆ ಎಂಬ ಹೆಸರಿನ ನಾಮಫಲಕಕ್ಕೆ ಶಿರೋಮಣಿ ಅಕಾಲಿದಳ ಕಪ್ಪು ಬಣ್ಣ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಮೊಘಲ್ ದೊರೆ ಔರಂಗಜೇಬ್ ಹೆಸರಿನ ರಸ್ತೆಯ ನಾಮಫಲಕಗಳು ಹಾಗೂ ವಿದ್ಯಾರ್ಥಿಗಳ ಇತಿಹಾಸದ ಪುಸ್ತಕಗಳಲ್ಲಿನ ಔರಂಗಜೇಬನ ಪಠ್ಯವನ್ನು ತೆಗೆಯಬೇಕು ಎಂದು ಶಿರೋಮಣಿ ಅಕಾಲಿ ದಳದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಹಾಗೂ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ(ಡಿಎಸ್‍ಜಿಎಂಸಿ) ಸದಸ್ಯರು ಒತ್ತಾಯಿಸಿದ್ದಾರೆ. ಅಲ್ಲದೆ ಔರಂಗಜೇಬ್ ಹೆಸರಿನ ರಸ್ತೆಗಳ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ.

ಔರಂಗಜೇಬ್ ಒಬ್ಬ ಹಂತಕ, ಅವನ ಒತ್ತಾಯಪೂರ್ವಕ ಮತಾಂತರದಿಂದ ಗುರು ತೇಜ್ ಬಹದ್ದೂರ್ ಅವರು ತಮ್ಮ ಪ್ರಾಣವನ್ನೇ ತ್ಯಜಿಸಿದರು. ಹೀಗಾಗಿ ನಾವು ರಸ್ತೆಗಳಿಗೆ ಔರಂಗಜೇಬನ ಹೆಸರಿಡುವುದು ಹಾಗೂ ವಿದ್ಯಾರ್ಥಿಗಳ ಇತಿಹಾಸ ಪುಸ್ತಕದಲ್ಲಿ ಆತನ ಪಠ್ಯ ಇರುವುದನ್ನು ವಿರೋಧಿಸುತ್ತೇವೆ. ಆತ ಒಬ್ಬ ಹಂತಕ, ಆತನ ಹೆಸರನ್ನು ರಸ್ತೆಗಳಿಗೆ ಇಡುವುದರಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಾಳಿ ಮಾರುಕಟ್ಟೆಯ ಬಾಬರ್ ರಸ್ತೆಯ ಹೆಸರಿಗೆ ಹಿಂದೂ ಸೇನೆಯವರು ಕಪ್ಪು ಬಣ್ಣ ಬಳಿದಿದ್ದರು. ರಸ್ತೆಯ ಹೆಸರನ್ನು ಬದಲಿಸುವಂತೆ ಸಂಘಟನೆಯು ಒತ್ತಾಯಿಸಿತ್ತು.

ದಕ್ಷಿಣ ಭಾರತದ ಕರ್ನಾಟಕದಲ್ಲಿ ಟಿಪ್ಪು ವಿರುದ್ಧ ಹೋರಾಟ ನಡೆಯುತ್ತಿದ್ದರೆ, ಉತ್ತರ ಭಾರತದಲ್ಲಿ ಔರಂಗಜೇಬನ ಕುರಿತು ಅಸಮಾಧಾನ ಎದ್ದಿದೆ. ಟಿಪ್ಪು ಜಯಂತಿಯನ್ನು ಸರ್ಕಾರ ನಿಲ್ಲಿಸಿದ್ದು, ಆತನ ಬಗ್ಗೆ ಇರುವ ಪಠ್ಯವನ್ನೂ ಪುಸ್ತಕದಿಂದ ತೆಗೆಯಬೇಕು ಎಂದು ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *