ಬಳ್ಳಾರಿ ಪಾಲಿಕೆಯ ಕೈ ಸದಸ್ಯನಿಂದ ಹಲ್ಲೆಗೆ ಒಳಗಾದ ಎಂಜಿನಿಯರ್‌ ಮೇಲೆ ಈಗ ಅಟ್ರಾಸಿಟಿ ಕೇಸ್‌!

2 Min Read

ಬಳ್ಳಾರಿ: ಮಹಾನಗರ ಪಾಲಿಕೆಯ ಕಾಂಗ್ರೆಸ್ (Congress) ಸದಸ್ಯನಿಂದ ಹಲ್ಲೆಗೆ ಒಳಗಾದ ಎಂಜಿನಿಯರ್‌ (Engineer) ಮೇಲೆಯೇ ಈಗ ಅಟ್ರಾಸಿಟಿ ಕೇಸ್‌ ದಾಖಲಾಗಿದೆ.

ಮಹಾನಗರ ಪಾಲಿಕೆ ಇಂಜಿನಿಯರ್ ವೀರೇಶ್ ಮೇಲೆ ಕಾಂಗ್ರೆಸ್ ಪಾಲಿಕೆ ಸದಸ್ಯ ಕುಬೇರ್ ಹಲ್ಲೆ ನಡೆಸಿದ್ದರು. ಈಗ ಹಲ್ಲೆಗೆ ಒಳಗಾಗಿದ್ದ ವೀರೇಶ್ ವಿರುದ್ದವೇ ಇದೀಗ ಅಟ್ರಾಸಿಟಿ ದೂರು ದಾಖಲಾಗಿದೆ.

ಕಾಂಗ್ರೆಸ್ ಪಾಲಿಕೆ ಸದಸ್ಯ ಕುಬೇರ ಅವರ ಆಪ್ತ ಕುಬೇರ ಎನ್ನುವರ ಮೂಲಕ ಅಟ್ರಾಸಿಟಿ ದೂರು (Atrocity Case) ದಾಖಲಾಗಿದೆ. ಶನಿವಾರ ತಡರಾತ್ರಿ ಬಳ್ಳಾರಿ (Ballari) ಮಹಾನಗರ ಪಾಲಿಕೆ ಮೇಯರ್ ಗಾದೆಪ್ಪ ನೇತೃತ್ವದಲ್ಲಿ ಠಾಣೆಗೆ ಬಂದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ದುರು ಕೊಟ್ಟಿದ್ದಾರೆ. ನಗರದ ರಾಯಲ್ ವೃತ್ತದಿಂದ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಪಾದಯಾತ್ರೆ ಮೂಲಕ ಹೋಗಿ ದೂರು ದಾಖಲು ಮಾಡಿದ್ದಾರೆ.

ಇದೇ ವೇಳೆ ಮಾತಮಾಡಿ ಕಾಂಗ್ರೆಸ್ ಮುಖಂಡರು, ನಮ್ಮ ಕಾರ್ಯಕರ್ತನಿಗೆ ಅಧಿಕಾರಿ ವೀರೇಶ್ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದಕ್ಕೆ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.

ಎಫ್‌ಐಆರ್‌ ದಾಖಲು:
ವೀರೇಶ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಕುಬೇರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿರೇಶ್‌ ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿ, ಜೀವಬೆದರಿಕೆ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ದಂಪತಿ ಮೇಲೆ ಶಾಸಕ ಶಿವಲಿಂಗೇಗೌಡ ಬಲಗೈ ಬಂಟನ ಪುತ್ರನಿಂದ ಹಲ್ಲೆ ಪ್ರಕರಣ – ಸುಮೋಟೋ ಕೇಸ್ ದಾಖಲು

ಆರೋಪಿ ಕುಬೇರ ಬಂಧನವಾಗುವವರೆಗೂ ಕೆಲಸ ಮಾಡುವುದಿಲ್ಲ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಪಾಲಿಕೆ ಸಿಬ್ಬಂದಿಗೆ ರಾಜ್ಯ ನೌಕರರ ಸಂಘದ ಬೆಂಬಲ ನೀಡಿದೆ.

ಹಲ್ಲೆ ನಡೆಸಿದ್ದು ಯಾಕೆ?
ಶುಕ್ರವಾರ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಸಲಾಂ ಬಳ್ಳಾರಿ ಕಾರ್ಯಕ್ರಮದ ವೇಳೆ ಹಲ್ಲೆ ನಡೆದಿತ್ತು. ಫುಟ್‌ಪಾತ್‌ ಮೇಲಿದ್ದ ಶೆಡ್ ತೆರವು ವಿಳಂಬ ಮಾಡಿದ ಹಿನ್ನೆಲೆ ಅಧಿಕಾರಿ ವಿರುದ್ದ ಪಾಲಿಕೆ ಸದಸ್ಯ ಕುಬೇರ ಕೂಗಾಡಿದ್ದರು. ಆಗ ಶಾಸಕ ಭರತ್ ರೆಡ್ಡಿ ಇಬ್ಬರನ್ನೂ ಬಿಡಿಸಿ ಸಮಾಧಾನ ಪಡಿಸಿದ್ದರು. ಶಾಸಕ ಭರತ್ ರೆಡ್ಡಿ ಬೇರೆಡೆ ತೆರಳುತ್ತಿದಂತೆ ಎಇಇ ವೀರೇಶ್ ಮೇಲೆ ಕುಬೇರ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ಅಸ್ವಸ್ಥಗೊಂಡಿರುವ ವೀರೇಶ್ ಬಳ್ಳಾರಿ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article