ಸಿದ್ದುಗೆ ಡಬಲ್ ಟೆನ್ಷನ್ – ಪರಮಾಪ್ತ ಮಹದೇವಪ್ಪಗೆ ಸಿಗುತ್ತಾ ಟಿಕೆಟ್?

Public TV
2 Min Read

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಒಂದು ಕಡೆ ತಾವು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬ ಗೊಂದಲದ ಟೆನ್ಷನ್. ಮತ್ತೊಂದು ಕಡೆ ತಮ್ಮ ಪರಮಾಪ್ತನ ಕುಟುಂಬಕ್ಕೆ ಎರಡು ಟಿಕೆಟ್ ಕೊಡಿಸಲೇ ಬೇಕಾದ ಟೆನ್ಷನ್. ಈ ಎರಡು ಟೆನ್ಷನ್‌ಗಳ ನಡುವೆ ಸಿದ್ದರಾಮಯ್ಯ ಒದ್ದಾಡುತ್ತಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ (HC Mahadevappa) ಪರಮಾಪ್ತ ಸ್ನೇಹಿತರು. ಎರಡು ದೇಹ ಒಂದೇ ಮನಸ್ಸು ಎಂಬ ರೀತಿ ಇರುವ ಜೋಡಿ ಇದು. ಈಗ ಡಾ.ಎಚ್.ಸಿ. ಮಹಾದೇವಪ್ಪ ಮತ್ತು ಅವರ ಮಗ ಸುನೀಲ್ ಬೋಸ್ ಇಬ್ಬರು ವಿಧಾನಸಭಾ ಚುನಾವಣೆಯ (Assembly election 2022) ಅಖಾಡಕ್ಕೆ ಇಳಿಯುವ ತಯಾರಿಯಲ್ಲಿದ್ದಾರೆ. ಡಾ.ಮಹದೇವಪ್ಪ ತಾವು ಸ್ಪರ್ಧಿಸುತ್ತಿದ್ದ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮಗನನ್ನು ಕಣಕ್ಕೆ ಇಳಿಸೋದು ತಾವು ಇದೇ ಕ್ಷೇತ್ರದ ಪಕ್ಕದ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಪ್ಲಾನ್ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಆಯಾ ಕ್ಷೇತ್ರಗಳಲ್ಲಿ ತಂದೆ – ಮಗ ಸಭೆಗಳನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ – ಮೂವರು ಸಾವು, ಇಬ್ಬರಿಗೆ ಗಾಯ

ಈ ನಡುವೆ ಲೋಕಸಭಾ ಚುನಾವಣೆಯಲ್ಲಿ (MP Election) ಸೋತ ಬಳಿಕ ಕೆಪಿಸಿಸಿ (KPCC)  ಕಾರ್ಯಾಧ್ಯಕ್ಷ ಧ್ರುವ ನಾರಾಯಣ (R Dhruvanarayana) ರಾಜ್ಯ ರಾಜಕೀಯಕ್ಕೆ ಮರು ಪ್ರವೇಶಿಸಲು ನಿರ್ಧರಿಸಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಓಡಾಟ ಶುರು ಮಾಡಿಕೊಂಡಿದ್ದಾರೆ. ಧ್ರುವ ನಾರಾಯಣ ಅವರು ಓಡಾಟ ಶುರು ಮಾಡಿಕೊಂಡ ಮೇಲೆಯೇ ಸಿದ್ದರಾಮಯ್ಯಗೆ ಸ್ನೇಹಿತನ ಟಿಕೆಟ್ ವಿಚಾರದಲ್ಲಿ ಟೆನ್ಷನ್ ಹೆಚ್ಚಾಗಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು

ಧೃವನಾರಾಯಣ್ ಹೇಳಿ ಕೇಳಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಕಾರಣ ಅವರನ್ನು ಟಿಕೆಟ್ ರೇಸ್‌ನಿಂದ ಹಿಂದೆ ಸರಿಸೋದು ಸುಲಭವಲ್ಲ. ನಂಜನಗೂಡು ಟಿಕೆಟ್ ವಿಚಾರದಲ್ಲಿ ಸಿದ್ದರಾಮಯ್ಯಗೆ ತಲೆ ಬೀಸಿ ಶುರು ಮಾಡಿಸಿದೆ. ಸಿದ್ದರಾಮಯ್ಯ ಅವರೇ ಇನ್ನೂ ತಾವು ಯಾವ ಕ್ಷೇತ್ರದಿಂದ ಕಣಕ್ಕೆ ಇಳಿಯಬೇಕು ಎಂದು ನಿರ್ಧರಿಸಲಾಗದೇ ಗೊಂದಲದಲ್ಲಿ ಮುಳುಗಿರುವಾಗ ಇದರ ಜೊತೆಗೆ ಪರಮಾಪ್ತ ಸ್ನೇಹಿತನ ರಾಜಕೀಯ (Politics) ಭವಿಷ್ಯವೂ ಅವರನ್ನು ಚಿಂತೆಗೆ ಈಡು ಮಾಡಿದೆ. ಪರಮಾಪ್ತ ಸ್ನೇಹಿತನಿಗೂ ಟಿಕೆಟ್ ಕೊಡಿಸದೇ ಹೋದರೆ ಹೇಗೆ? ಎಂಬುದು ಸಿದ್ದರಾಮಯ್ಯರನ್ನ ಕಾಡುತ್ತಿರುವ ಪ್ರಶ್ನೆಯಾಗಿದೆ.

ಮೈಸೂರು (Mysuru) ಜಿಲ್ಲೆಯ 11 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪಾಲಿಗೆ ಟಿಕೆಟ್ ಹಂಚುವ ವಿಚಾರದಲ್ಲಿ ಹೆಚ್ಚು ಒತ್ತಡ ಇರೋದು ನಂಜನಗೂಡು ಕ್ಷೇತ್ರದ್ದು ಮಾತ್ರ. ಉಳಿದ ಕ್ಷೇತ್ರಗಳ ಟಿಕೆಟ್ ಹಂಚಿಕೆ ಸಿದ್ದರಾಮಯ್ಯರಂತಹ ರಾಜಕಾರಣಿಗೆ ನೀರು ಕುಡಿದಷ್ಟೆ ಸುಲಭ. ಆದರೆ ನಂಜನಗೂಡು ಕ್ಷೇತ್ರದ ಟಿಕೆಟ್ ವಿಚಾರ ಮಾತ್ರ ಸಲೀಸಾಗಿ ಇಲ್ಲ.

ಡಾ.ಎಚ್.ಸಿ. ಮಹದೇವಪ್ಪ ತಮಗೆ ನಂಜನಗೂಡು ಟಿಕೆಟ್ ನಿಶ್ಚಿತ ಎಂಬಂತೆ ಬಹಳ ಆತ್ಮವಿಶ್ವಾಸದಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಿ ಚುನಾವಣಾ ತಯಾರಿಯಲ್ಲಿ ಮುಳುಗಿದ್ದಾರೆ. ಧೃವನಾರಾಯಣ ಕೂಡ ಪಕ್ಷದ ದೊಡ್ಡ ಜವಾಬ್ದಾರಿ ಹೊತ್ತಿರೋ ಕಾರಣ ತಮಗೇ ಟಿಕೆಟ್ ಸಿಗಬಹುದು ಎಂದು ನಂಜನಗೂಡಿನ ಸಂಘಟನೆ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಹೀಗಾಗಿ ನಂಜನಗೂಡು ಕಾಂಗ್ರೆಸ್ ಕಾರ್ಯಕರ್ತರಿಗೆ ತಾವು ಯಾರ ಬೆನ್ನಿಗೆ ನಿಲ್ಲಬೇಕು ಎಂಬ ಗೊಂದಲವೂ ಕಾಡ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *