ಹುಬ್ಬಳ್ಳಿಯಲ್ಲಿ 2 ಗುಂಪುಗಳ ನಡುವೆ ಘರ್ಷಣೆ – ಮಾಜಿ ಮೇಯರ್‌ನಿಂದ ಅಮಾಯಕರ ಮೇಲೆ ಹಲ್ಲೆ

Public TV
1 Min Read

ಹುಬ್ಬಳ್ಳಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪಗಳ ನಡುವೆ ಘರ್ಷಣೆ ನಡೆದಿದ್ದು, ಮಾಜಿ ಮೇಯರ್ ಸೇರಿದಂತೆ ಅವರ ಬೆಂಬಲಿಗರು ಕಲ್ಲು ತೂರಾಟ ನಡೆಸಿರುವ ಘಟನೆ ಹುಬ್ಬಳ್ಳಿಯ ತೊರವಿಹಕ್ಕಲ್‍ದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕಮರಿಪೇಟ್‍ನಲ್ಲಿ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಗುಂಪು ಹಾಗೂ ಅವರ ಸಮುದಾಯದ ಇನ್ನೊಂದು ಗುಂಪಿನ ಮಧ್ಯೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ನಾಲ್ಕೈದು ಬೈಕ್‍ಗಳು ಜಖಂಗೊಂಡಿದ್ದು, ಐದಾರು ಜನರಿಗೆ ಪೆಟ್ಟು ಬಿದ್ದಿದೆ.

ಕಮರಿಪೇಟ್‍ನಲ್ಲಿನ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 10-15 ವರ್ಷಗಳಿಂದ ಈ ಗುಂಪುಗಳ ಮಧ್ಯೆ ವಿವಾದವಿತ್ತು. ಈ ವಿಷಯ ಈಗಾಗಲೇ ನ್ಯಾಯಾಲಯ ಮೆಟ್ಟಿಲೇರಿದೆ. ಆಗಾಗ ಎರಡು ಗುಂಪುಗಳ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಇವರ ನಡುವೆ ಗಲಾಟೆ ನಡೆದಿತ್ತು.

ಈ ವಿಚಾರವನ್ನು ಮರು ಪ್ರಶ್ನಿಸಲು ಶುಕ್ರವಾರ ಒಂದು ಗುಂಪು ತೊರವಿಹಕ್ಕಲದಲ್ಲಿ ರಾತ್ರಿ ಆಗಮಿಸಿತ್ತು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಮಾರಾಮಾರಿ, ಕಲ್ಲು ತೂರಾಟ ನಡೆದಿದೆ. ಪೊಲೀಸರ ಸಮ್ಮುಖದಲ್ಲಿ ಗಲಾಟೆ ನಡೆದರೂ ಪೊಲೀಸರು ಮಾತ್ರ ಮೂಖ ಪ್ರೇಕ್ಷಕರಾಗಿದ್ದರು.

ಈ ಘಟನೆಯಲ್ಲಿ ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *