ಪೌರತ್ವ ಸಾಬೀತುಪಡಿಸಿ ಎಂದಿದ್ದಕ್ಕೆ ಮಗ ಆತ್ಮಹತ್ಯೆ- 10 ವರ್ಷದ ಬಳಿಕ ವೃದ್ಧೆಗೆ ಮತ್ತೆ ನೋಟಿಸ್‌

Public TV
2 Min Read

ದಿಸ್ಪುರ: ಪೌರತ್ವ ಸಾಬೀತುಪಡಿಸಿ ಎಂದು ನೋಟಿಸ್‌ ನೀಡಿದ ಪರಿಣಾಮವಾಗಿ ಮಗನನ್ನು ಕಳೆದುಕೊಂಡಿದ್ದ ವೃದ್ಧೆಗೆ ಈಗ ಮತ್ತೆ ನೋಟಿಸ್‌ ನೀಡಲಾಗಿದೆ.

ಪೌರತ್ವ ಸಾಬೀತುಪಡಿಸಿ ಎಂದು ಅಸ್ಸಾಂನ ಕ್ಯಾಚಾರ್ ಜಿಲ್ಲೆಯ 80 ವರ್ಷದ ವೃದ್ಧೆಗೆ ನೋಟಿಸ್‌ ನೀಡಲಾಗಿದೆ. 2012ರಲ್ಲಿ ಇದೇ ರೀತಿ ನೋಟಿಸ್‌ ನೀಡಲಾಗಿತ್ತು. ಆಗ ಈ ವೃದ್ಧೆಯ ಮಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮತ್ತೆ ನೋಟಿಸ್‌ ಕೊಡಲಾಗಿದೆ. ಇದನ್ನೂ ಓದಿ: ಕೆಂಪು ಟೋಪಿ ವಿರುದ್ಧ ಅಪಪ್ರಚಾರ, ಬೇರೆ ಬಣ್ಣದ ಟೋಪಿ ಧರಿಸಲು ಜನರಿಗೆ ಒತ್ತಾಯ: ಅಖಿಲೇಶ್

ಅಕೊಲ್‌ ರಾಣಿ ನಾಮಸೂದ್ರ ಎಂಬ ವೃದ್ಧೆ ಇಂಡೋ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿ ಸಮೀಪವಿರುವ ಕಟೋಗೋರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹರಿಟಿಕರ್‌ ಭಾಗ-1ರ ನಿವಾಸಿ. ಕಳೆದ ತಿಂಗಳು, ಸಿಲ್ಚಾರ್‌ನಲ್ಲಿರುವ ವಿದೇಶಿಯರ ನ್ಯಾಯಮಂಡಳಿಯು ಮಾ.5ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿದೆ.

ನೀವು ನಿಗದಿತ ಅವಧಿಯೊಳಗೆ ನಿಮ್ಮ ಪೌರತ್ವದ ಬಗ್ಗೆ ಯಾವುದೇ ಮಾನ್ಯ ದಾಖಲೆಗಳನ್ನು ಪೊಲೀಸರ ಮುಂದೆ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಆಧಾರದ ಮೇಲೆ ನೀವು ಅಕ್ರಮ ವಲಸಿಗರು ಎಂದು ಶಂಕಿಸಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ ಸುರಕ್ಷಿತವಾಗಿ ಮಗಳು ಭಾರತಕ್ಕೆ – ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ತಂದೆ

ಈ ಕುರಿತು ಮಾತನಾಡಿರುವ ವಕೀಲ ಅನಿಲ್‌ ಡೇ ಅವರು, 2012ರಲ್ಲಿ ಇದೇ ರೀತಿಯ ಸೂಚನೆಯಿಂದಾಗಿ ಅವರ ಮಗ ನಿಧನರಾದರು. ಆದರೆ ಅವರ ಮರಣದ ನಂತರ ಅವರನ್ನು ಭಾರತೀಯ ಎಂದು ಘೋಷಿಸಲಾಯಿತು. ಆ ವ್ಯಕ್ತಿಯ ತಾಯಿಗೆ ಮತ್ತೆ ಅದೇ ನ್ಯಾಯಾಲಯದಿಂದ ಹೇಗೆ ನೋಟಿಸ್‌ ಬಂದಿದೆ ಎಂಬುದು ಅರ್ಥವಾಗುತ್ತಿಲ್ಲ. ಏ.4ರಂದು ಮತ್ತೆ ಹಾಜರಾಗುವಂತೆ ಕೋರ್ಟ್‌ ಹೇಳಿದ್ದು, ಅಂದು ಸಮರ್ಪಕ ದಾಖಲೆಗಳನ್ನು ಸಲ್ಲಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ತಂದೆಯ ಹೆಸರಿನಲ್ಲಿ ಭಾರತ ಸರ್ಕಾರವು 1956ರ ಪೌರತ್ವ ಕಾರ್ಡ್ ಅನ್ನು ಹೊಂದಿದ್ದರೂ, 2012 ರಲ್ಲಿ ಅರ್ಜುನ್ ನಾಮಸೂದ್ರ ಅವರ ಪೌರತ್ವವನ್ನು ಪ್ರಶ್ನಿಸಲಾಗಿತ್ತು. ತನ್ನನ್ನು ಬಂಧಿಸಿ ಬಾಂಗ್ಲಾದೇಶಕ್ಕೆ ತಳ್ಳುತ್ತಾರೆಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅವರ ಕುಟುಂಬದವರು ಹೇಳಿದ್ದಾರೆ.

2014ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಚಾರ್‌ಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಭಾಷಣದಲ್ಲಿ ಅರ್ಜುನ್ ನಾಮಸೂದ್ರ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಅರ್ಜುನ್ ನಾಮಸೂದ್ರ ನನ್ನ ಸಹೋದರನಾಗಿದ್ದು, ಅವರ ಸಾವಿನಿಂದ ನನಗೆ ನೋವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅರ್ಜುನ್‌ನಂಥವರಿಗೆ ಸಮಸ್ಯೆ ಆಗುವುದಿಲ್ಲ. ಯಾರೂ ಭಯಭೀತರಾಗಬೇಡಿ, ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ

ನಾವು ಗಡಿ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ಭಾರತದಿಂದ ಹೊರದೂಡುತ್ತಾರೆಂಬ ಭಯವಿದೆ. ಆ ಭಯದಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ. 10 ವರ್ಷಗಳ ಹಿಂದೆ ನನ್ನ ಮಗನನ್ನು ಕಳೆದುಕೊಂಡೆ. ಇಂದು ಕಳೆದುಕೊಳ್ಳಲು ಏನೂ ಇಲ್ಲ. ನನ್ನ ಗುರುತನ್ನು ಮತ್ತೊಮ್ಮೆ ಸಾಬೀತುಪಡಿಸಲು ಕೇಳಿದ್ದಾರೆ. ನ್ಯಾಯಾಂಗವನ್ನು ಗೌರವಿಸಿ, ನಾನು ಪೌರತ್ವ ಸಾಬೀತುಪಡಿಸುತ್ತೇನೆ ಎಂದು ವೃದ್ಧೆ ಅಕೊಲ್‌ ರಾಣಿ ನಾಮಸೂದ್ರ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *