ಸೈಕಲ್‍ನಲ್ಲೇ ತಮ್ಮನ ಶವ ಸಾಗಿಸಿದ ವ್ಯಕ್ತಿ!- ಬಿದಿರಿನ ಸೇತುವೆ ಕುಸಿದು ನದಿಗೆ ಬಿದ್ದ ತನಿಖಾ ತಂಡ

Public TV
2 Min Read

ಗುವಾಹಾಟಿ: ಒಡಿಶಾದಲ್ಲಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದ ಕಾರಣ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಶವವನ್ನ ಹೆಗಲ ಮೇಲೆ ಹೊತ್ತು 10 ಕಿ.ಮೀ ದೂರ ನಡೆದ ಘಟನೆ ಮಾಸುವ ಮುನ್ನವೇ ಇದೀಗ ಅಂಥದ್ದೇ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಹೌದು. ಅಸ್ಸಾಂನಲ್ಲಿ ವ್ಯಕ್ತಿಯೊಬ್ಬರು ಗ್ರಾಮಕ್ಕೆ ವಾಹನ ಸಂಚರಿಸುವ ರಸ್ತೆ ಇಲ್ಲದ ಕಾರಣಕ್ಕೆ ತನ್ನ ತಮ್ಮನ ಶವವನ್ನ 8 ಕಿ.ಮಿ ದೂರ ಸೈಕಲ್‍ನಲ್ಲಿ ಕಟ್ಟಿ ಸಾಗಿಸಿದ್ದಾರೆ. ಈ ಘಟನೆ ಅಸ್ಸಾಂ ಸಿಎಂ ಸರ್ಬಾನಂದ ಸೋನೋವಾಲ್ ಅವರ ಸ್ವಕ್ಷೇತ್ರ ಮಂಜುಲಿ ಜಿಲ್ಲೆಯ ಬಲಿಜಾನ್ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

ಅನಾರೋಗ್ಯದಲ್ಲಿದ್ದ ಡಿಂಪಲ್ ದಾಸ್ ಎಂಬವರನ್ನ ಸೋಮವಾರ ಮಂಜುಲಿಯ ಗರಾಮುರ್‍ನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಆಸ್ಪತ್ರೆ ವ್ಯಾನ್‍ನ ಡ್ರೈವರ್ ಬರುವ ಮೊದಲೇ ಮೃತ ಡಿಂಪಲ್ ದಾಸ್ ಶವವನ್ನ ಅವರ ಅಣ್ಣ ಆಸ್ಪತ್ರೆಯಿಂದ 8 ಕಿ.ಮೀ ದೂರದಲ್ಲಿರೋ ತನ್ನ ಮನೆಗೆ ಸೈಕಲ್‍ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಮುಖ್ಯರಸ್ತೆಯಿಂದ ಬಲಿಜಾನ್ ಗ್ರಾಮಕ್ಕೆ ತೆರಳಲು ವಾಹನ ಸಂಚರಿಸುವಂತಹ ರಸ್ತೆ ಇಲ್ಲ. ಬಿದಿರಿನ ಸೇತುವೆ ದಾಟಿ ಊರಿಗೆ ಹೋಗಬೇಕು. ಹೀಗಾಗಿ ಶವವನ್ನ ಸೈಕಲ್‍ನಲ್ಲೇ ಸಾಗಿಸಿದ್ದಾರೆ.

ಈ ಬಗ್ಗೆ ಮಂಜುಲಿ ಜಿಲ್ಲಾಡಳಿತ ಈಗಾಗಲೇ ತನಿಖೆ ಆರಂಭಿಸಿದೆ. ಮೃತ ವ್ಯಕ್ತಿಯ ಕುಟುಂಬಸ್ಥರು 108 ಅಂಬುಲೆನ್ಸ್‍ಗೆ ಕರೆ ಮಾಡಿರುವುದು ನಿಜವೇ ಹಾಗೂ ವ್ಯಕ್ತಿ ಶವವನ್ನು ಆಸ್ಪತ್ರೆ ಆವರಣದಲ್ಲೇ ಸೈಕಲ್‍ಗೆ ಕಟ್ಟುತ್ತಿರೋದನ್ನು ಆಸ್ಪತ್ರೆಯ ಸಿಬ್ಬಂದಿ ಯಾರೂ ನೋಡಿದ್ದಾರೆಯೇ ಎಂಬುವುದರ ಬಗ್ಗೆ ತನಿಖೆ ಅರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನದಿಗೆ ಬಿದ್ದ ತನಿಖಾ ತಂಡ: ಸಿಎಂ ಸೋನಾವಾಲಾ ಅವರ ಸೂಚನೆ ಮೇರೆಗೆ ಆರೋಗ್ಯ ಸೇವೆಗಳ ರಾಜ್ಯ ನಿರ್ದೇಶಕರ ನೇತೃತ್ವದಲ್ಲಿ ಮತ್ತೊಂದು ತಂಡ ಘಟನೆ ಬಗ್ಗೆ ತನಿಖೆ ಮಾಡಲು ಬುಧವಾರದಂದು ಆ ವ್ಯಕ್ತಿಯ ಗ್ರಾಮಕ್ಕೆ ಹೋಗುತ್ತಿತ್ತು. ಈ ವೇಳೆ ಬಿದಿರಿನ ಸೇತುವೆ ಮೇಲೆ ಭಾರ ಜಾಸ್ತಿಯಾಗಿ ಸೇತುವೆ ಕುಸಿದ ಕಾರಣ ತನಿಖಾ ತಂಡದ ಅಧಿಕಾರಿಗಳು ನದಿಗೆ ಬಿದ್ದಿದ್ದಾರೆ. ಸಹಾಯಕ ನಿರ್ದೇಶಕ ತಂಕೇಶ್ವರ್ ದಾಸ್ ಹಾಗೂ ಮಂಜುಲಿಯ ಸಹಾಯಕ ಉಪ ಆಯುಕ್ತರಾದ ನರೇನ್ ದಾಸ್ ಸೇರಿದಂತೆ ನಾಲ್ವರು ಅಧಿಕಾರಿಗಳು ನದಿಗೆ ಬಿದ್ದಿದ್ದಾರೆಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *