ಪಾಕ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

Public TV
3 Min Read

ದುಬೈ: ಏಷ್ಯಾ ಕಪ್ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಅನಾಯಾಸದ ಜಯ ಸಾಧಿಸಿದೆ. ಗೆಲುವಿಗೆ 163 ರನ್ ಗಳ ಬೆನ್ನತ್ತಿದ ಟೀಂ ಇಂಡಿಯಾ ಇನ್ನೂ 21 ಓವರ್ ಗಳು ಬಾಕಿ ಇರುವಂತೆಯೇ 8 ವಿಕೆಟ್ ಗಳ ಗೆಲುವು ಸಾಧಿಸಿದೆ.

ಪಾಕ್ ನೀಡಿದ ಸುಲಭ ಗೆಲುವಿನ ಗುರಿಯನ್ನು ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಧವನ್ ಜೋಡಿ ಪಾಕ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ 86 ರನ್ ಜೊತೆಯಾಟ ನೀಡಿತು. ಈ ವೇಳೆ ಕೇವಲ 36 ಎಸೆಗಳಲ್ಲಿ ಅರ್ಧ ಶತಕ ಪೂರೈಸಿ ಬಿರುಸಿನ ಆಟಕ್ಕೆ ಮುಂದಾದ ನಾಯಕ ರೋಹಿತ್ ಶರ್ಮಾ 52 ರನ್ (4 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಬಳಿಕ ಅರ್ಧ ಶತಕದ ಅಂಚಿನಲ್ಲಿ ಎಡವಿದ ಧವನ್ 46 ರನ್ ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ದಿನೇಶ್ ಕಾರ್ತಿಕ್ (31 ರನ್) ಹಾಗೂ ಅಂಬಟಿ ರಾಯುಡು (31 ರನ್) ನಿಧಾನಗತಿ ಬ್ಯಾಟಿಂಗ್ ನಡೆಸಿದರು. ಅಂತಿಮವಾಗಿ ಟೀಂ ಇಂಡಿಯಾ ಕೇವಲ 29 ಓವರ್ ಗಳಲ್ಲಿ 163 ರನ್ ಗಳಿಸಿ ಗುರಿ ಮುಟ್ಟಿತು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕ್ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿ 43.1 ಓವರ್ ಗಳಲ್ಲಿ 162 ರನ್ ಗಳಿಗೆ ಅಲೌಟ್ ಆಗಿತ್ತು. ಪಾಕ್ ಗೆ ಮೊದಲ ಆಘಾತ ನೀಡಿದ ಭುವನೇಶ್ವರ್ ಕುಮಾರ್ ಆರಂಭಿಕ ಜೋಡಿಯಾದ ಇಮಾಮ್ ಹುಲ್ ಹಕ್, ಫಖರ್ ಜಮಾನ್ ವಿಕೆಟ್ ಪಡೆದರು.

ಈ ಹಂತದಲ್ಲಿ ಪಾಕ್‍ಗೆ ಆಸರೆಯಾದ ಬಾಬರ್ ಅಜಮ್ 47 ರನ್ ಗಳಿಸಿದರೆ ಶೊಯೆಬ್ ಮಲಿಕ್ 43 ರನ್ ಗಳಿಸಿದರು. ಮೂರನೇ ವಿಕೆಟ್‍ಗೆ ಈ ಜೋಡಿ 82 ರನ್ ಜೊತೆಯಾಟ ನೀಡಿ ತಂಡದ ಚೇತರಿಕೆಗೆ ಕಾರಣರಾದರು. ಈ ವೇಳೆ ಬೌಲಿಂಗ್ ಗೆ ಆಗಮಿಸಿದ ಕುಲದೀಪ್ ಯಾದವ್ ಅರ್ಧ ಶತಕದ ಅಂಚಿನಲ್ಲಿದ್ದ ಬಾಬರ್ ಗೆ ಗೂಗ್ಲಿ ಎಸೆತದಲ್ಲಿ ಬೌಲ್ಡ್ ಮಾಡಿದರು. ಇತ್ತ ಉತ್ತಮ ಆಟವಾಡುತ್ತಿದ್ದ ಮಲಿಕ್ ಅನಗತ್ಯ ರನ್ ಕದಿಯಲು ಯತ್ನಿಸಿ ಅಂಬಟಿ ರಾಯುಡು ಕೈಲಿ ರನೌಟ್ ಆದರು.

24 ಓವರ್ ಗಳಲ್ಲಿ 96 ರನ್‍ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕ್ ತಂಡಕ್ಕೆ ಮುಳುವಾದ ಕೇದಾರ್ ಜಾಧವ್ ನಾಯಕ ಸರ್ಫರಾಜ್, ಅಸಿಫ್ ಅಲಿ, ಶಾದಾಬ್ ಖಾನ್ ವಿಕೆಟ್ ಪಡೆದು ಮತ್ತೆ ಆಘಾತ ನೀಡಿದರು. ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ತಮ್ಮ ಮೊನಚಾದ ವಿಕೆಟ್ ಕೀಪಿಂಗ್ ಮೂಲಕ ಗಮನಸೆಳೆದರು.

ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಪಾಕ್ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಫಹೀಮ್ ಅಶ್ರಫ್ (18 ರನ್) ಬುಮ್ರಾ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ಹಸನ್ ಅಲಿ (1 ರನ್), ಉಸ್ಮಾನ್ ಖಾನ್ (0 ರನ್) ಬಂದಷ್ಟೇ ವೇಗದಲ್ಲಿ (1 ರನ್) ನಿರ್ಗಮಿಸಿದರು. ಅಂತಿಮವಾಗಿ ಪಾಕ್ 162 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಭಾರತದ ಪರ ಭುವನೇಶ್ವರ್ ಕುಮಾರ್, ಜಾದವ್ ತಲಾ 3 ವಿಕೆಟ್ ಪಡೆದರೆ, ಬುಮ್ರಾ 2, ಕುಲ್‍ದೀಪ್ ಯಾದವ್ 1 ವಿಕೆಟ್ ಪಡೆದರು.  ಇದನ್ನು ಓದಿ:  ಪಾಕ್ ವಿರುದ್ಧದ ಮ್ಯಾಚಲ್ಲಿ ಹಾರ್ದಿಕ್ ಪಾಂಡ್ಯಗೆ ಗಂಭೀರ ಗಾಯ

ಇಂದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಚಿಕಿತ್ಸೆ ಮುಂದುವರಿದಿದ್ದು, ಹಾರ್ದಿಕ್ ಪಾಂಡ್ಯ ಸದ್ಯ ನಿಂತು ಕೊಳ್ಳಲು ಸಮರ್ಥರಾಗಿದ್ದು, ವೈದ್ಯಕೀಯ ತಂಡ ಅವರನ್ನು ತಪಾಸಣೆ ನಡೆಸುತ್ತಿದೆ ಎಂದು ಬಿಸಿಸಿಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.  ಇದನ್ನು ಓದಿ: ಬೌಂಡರಿ ಗೆರೆಯಲ್ಲಿ ಮನೀಶ್ ಪಾಂಡೆ ಅದ್ಭುತ ಕ್ಯಾಚ್ – ವೀಡಿಯೋ ನೋಡಿ 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *