ರಾಜ್ಯ ಸರ್ಕಾರದಿಂದ ಭೂಮಿ, 50% ಮೊತ್ತ ಭರಿಸಲು ನಿರಾಕರಣೆ; ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆ ಸ್ಥಗಿತ

Public TV
1 Min Read

– ಲೋಕಸಭೆಯಲ್ಲಿ ಅಶ್ವಿನಿ ವೈಷ್ಣವ್‌ ಮಾಹಿತಿ

ನವದೆಹಲಿ: ರಾಜ್ಯ ಸರ್ಕಾರವು ಉಚಿತವಾಗಿ ಭೂಮಿ ಹಾಗೂ ಯೋಜನಾ ವೆಚ್ಚದ ಶೇ 50 ಮೊತ್ತ ಭರಿಸಲು ನಿರಾಕರಿಸಿದ ಕಾರಣಕ್ಕೆ ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಅವರು, 79 ಕಿ.ಮೀ. ಉದ್ದದ ಈ ಮಾರ್ಗಕ್ಕೆ 832 ಕೋಟಿ ವೆಚ್ಚವಾಗಲಿದೆ. ಈ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಯೋಜನೆಗೆ ಅಗತ್ಯವಿರುವ 488 ಹೆಕ್ಟೇರ್‌ ಜಾಗವನ್ನು ರಾಜ್ಯ ಸರ್ಕಾರ ಉಚಿತವಾಗಿ ಸ್ವಾಧೀನಪಡಿಸಿ ಹಸ್ತಾಂತರಿಸಬೇಕು ಹಾಗೂ ಯೋಜನಾ ಮೊತ್ತದ ಶೇ ೫೦ ಭರಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ, ರಾಜ್ಯ ಸರ್ಕಾರ ಈ ಒಪ್ಪಂದದಿಂದ ಹಿಂದಕ್ಕೆ ಸರಿದಿದೆʼ ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ 2025-26ನೇ ಆರ್ಥಿಕ ವರ್ಷದ ಅಂತ್ಯಕ್ಕೆ 23 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ನಾರಾಯಣ ಕೊರಗಪ್ಪ ಪ್ರಶ್ನೆಗೆ ಉತ್ತರ ನೀಡಿದ ಅವರು, ʼ600 ಕಿ.ಮೀ. ಉದ್ದದ ಈ ಹೆದ್ದಾರಿಗಳ ನಿರ್ಮಾಣಕ್ಕೆ ಅಂದಾಜು ₹10,749 ಕೋಟಿ ವೆಚ್ಚ ಮಾಡಲಾಗುತ್ತಿದೆʼ ಎಂದು ಹೇಳಿದರು.

Share This Article