6 ತಿಂಗಳಲ್ಲಿ ಸ್ಯಾಂಕಿ ಕೆರೆ ಸಮಗ್ರ ಅಭಿವೃದ್ಧಿ: ಸಚಿವ ಅಶ್ವತ್ಥನಾರಾಯಣ

Public TV
1 Min Read

ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯನ್ನು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಸಾರ್ವಜನಿಕರ ಸಲಹೆಗಳನ್ನು ಕೂಡ ಇದರಲ್ಲಿ ಪರಿಗಣಿಸಲಾಗಿದೆ. ಗರಿಷ್ಠ 6 ತಿಂಗಳಲ್ಲಿ ಕೆರೆಯ ಸೌಂದರ್ಯವೃದ್ಧಿ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನೂ ಮುಗಿಸಲಾಗುವುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬುಧವಾರ ಬೆಳಿಗ್ಗೆ ಸ್ಯಾಂಕಿ ಕೆರೆಯಲ್ಲಿ ಪಾದಯಾತ್ರೆ ಮಾಡಿ, ಸ್ಯಾಂಕಿ ಕೆರೆ ನಡಿಗೆದಾರರ ಸಂಘದ ಸದಸ್ಯರೊಂದಿಗೆ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣೆ ಬಗ್ಗೆ ಅವರು ಮುಕ್ತ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಯನ್ನೂ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಕೆರೆಯ ಆವರಣದಲ್ಲಿ ಎರಡು ಓಪನ್ ಜಿಮ್ ಗಳಿವೆ. ಅದರಲ್ಲಿ ಒಂದು ಕೆಟ್ಟಿದೆ. ಅದನ್ನು ಸರಿಪಡಿಸಲಾಗುವುದು. ಅದರ ಜೊತೆಗೆ ಇನ್ನೂ ನಾಲ್ಕು ಓಪನ್ ಜಿಮ್ ಸ್ಥಾಪಿಸಲಾಗುವುದು. ಇದಕ್ಕೆ ನಡಿಗೆದಾರರ ಸಂಘದ ಸದಸ್ಯರೇ ಜಾಗವನ್ನು ಗುರುತಿಸಬೇಕು. ಸಂಘವು ಹೇಳಿದ ಜಾಗದಲ್ಲಿ ಈ ಜಿಮ್ ಸ್ಥಾಪಿಸಲಾಗುವುದು ಎಂದರು. ಇದನ್ನೂ ಓದಿ: ನಂಬಿಕೊಂಡವರನ್ನು ಯಡಿಯೂರಪ್ಪ ಎಂದಿಗೂ ಕೈಬಿಟ್ಟಿಲ್ಲ: ಶಾಸಕ ಎನ್.ಮಹೇಶ್

ಕೆರೆಯ ಸೌಂದರ್ಯೀಕರಣಕ್ಕೆ ಒತ್ತು ಕೊಡಲಾಗಿದ್ದು, ನೀರು ಮಲಿನಗೊಳ್ಳದಂತೆ ಎಚ್ಚರ ವಹಿಸಲಾಗುವುದು. ಜೊತೆಗೆ, ಹೊರಭಾಗದ ಕೊಳಚೆ ನೀರು ಯಾವ ಕಾರಣಕ್ಕೂ ಕೆರೆಗೆ ಸೇರದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Ashwath Narayan

ಕೊರೊನಾ ಹಾವಳಿ ಈಗ ಬಹುತೇಕ ಇಲ್ಲದಂತಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಹೀಗಾಗಿ, ಕೆರೆಗೆ ವಾಯುವಿಹಾರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಹಿಂದೆ ಹಣಕಾಸಿನ ತೊಂದರೆಯಾಗಿ ಕೆರೆಯಲ್ಲಿ ಹಂತಹಂತವಾಗಿ ಕಾಮಗಾರಿಗಳನ್ನು ನಡೆಸಿದ್ದರಿಂದ ಕೆಲವು ಅನನುಕೂಲಗಳಾಗಿದ್ದವು. ಆದರೆ ಈ ಬಾರಿ ಒಂದೇ ಸುತ್ತಿನಲ್ಲಿ ಸಮಗ್ರ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಹಿಂದೂ ಸಮಾಜದ ಬಹು ಕಾಲದ ನೋವು ಬೇಸರ ಸ್ಫೋಟಗೊಂಡಿದೆ- ಪೇಜಾವರ ಶ್ರೀ

ಪಾದಯಾತ್ರೆಯಲ್ಲಿ ನಡಿಗೆದಾರರ ಸಂಘದ ಅಧ್ಯಕ್ಷ ರಂಗನಾಥ್, ಬಿಬಿಎಂಪಿ ಪಶ್ಚಿಮ ವಿಭಾಗದ ಆಯುಕ್ತ ದೀಪಕ್, ಜಂಟಿ ಆಯುಕ್ತ ಶ್ರೀನಿವಾಸ್, ಕೆರೆಗಳ ವಿಭಾಗದ ಪ್ರಧಾನ ಎಂಜಿನಿಯರ್ ವಿಜಯಕುಮಾರ್ ಮುಂತಾದವರಿದ್ದರು.

Share This Article
Leave a Comment

Leave a Reply

Your email address will not be published. Required fields are marked *