ಆಶ್ರಮದಲ್ಲಿರುವ ಮಕ್ಕಳಿಗೆ ಕಿರುಕುಳ ನೀಡಿದವನಿಗೆ ಧರ್ಮದೇಟು

Public TV
1 Min Read

ಧಾರವಾಡ: ಆಶ್ರಮದಲ್ಲಿರುವ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದವನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಹೊರವಲಯದ ಅಕ್ಕಮಹಾದೇವಿ ಆಶ್ರಮದಲ್ಲಿ ಶಿಕ್ಷಕಿ ಮಕ್ಕಳ ಆರೈಕೆ ಮಾಡಿಕೊಂಡಿದ್ದಾರೆ. ಆಕೆಯ ಗಂಡ ಲಕ್ಷ್ಮಣ ಪೂರದ ಕೂಡ ಇದೇ ಆಶ್ರಮದಲ್ಲಿ ಬಂದು ಇರುತ್ತಿದ್ದನು. ಲಕ್ಷ್ಮಣ ಇಲ್ಲಿರುವ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದನು. ಈ ವಿಷಯ ಮಂಡ್ಯದಿಂದ ಕೆಲಸದ ನಿಮಿತ್ತ ಬಂದಿದ್ದ ಕೆಲ ಯುವಕರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಂಡ್ಯದ ಯುವಕರು ಆತನಿಗೆ ಪ್ರಶ್ನೆ ಮಾಡಿ ಚೆನ್ನಾಗಿ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಕ್ಕಳಿಂದ ಮಸಾಜ್ ಮಾಡಿಸುವುದು, ಅವರಿಗೆ ವಿಡಿಯೋ ತೋರಿಸುವ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಕಿತಾಪತಿ ಇಷ್ಟು ದಿನ ಗೊತ್ತಿರಲಿಲ್ಲ. ಆದರೆ ಈ ಮಕ್ಕಳು ಮಂಡ್ಯದಿಂದ ಬಂದಿರುವ ಯುವಕರ ಕೊಠಡಿಗೆ ಹೋಗಿ ಊಟ ಕೇಳಿದ್ದಾರೆ. ಆಗ ಯುವಕರು ಮಕ್ಕಳಿಗೆ ಯಾಕೆ ಊಟ ಮಾಡಿಲ್ಲ ಎಂದು ಪ್ರಶ್ನೆ ಮಾಡಿದಾಗ, ಮಕ್ಕಳು ಊಟ ಸರಿಯಾಗಿ ನೀಡುತ್ತಿಲ್ಲ, ಹಾಗೂ ಕೇಳಿದ್ರೆ ಆತ ಹೊಡೆಯುತ್ತಾನೆ ಎಂಬ ಎಲ್ಲಾ ವಿಷಯ ಬಿಚ್ಚಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ ಮಂಡ್ಯದ ಯುವಕರ ಜೊತೆ ಸ್ಥಳೀಯ ಯುವಕರು ಕೂಡ ಸೇರಿ ಆತನಿಗೆ ಧರ್ಮದೇಟು ನೀಡಿದ್ದಾರೆ. ಕೂಡಲ ಸಂಗಮದಲ್ಲಿ ಕಳೆದ ನಾಲ್ಕು ದಿನಗಳಿಂದ ಶರಣ ಮೇಳ ನಡೆಯುತ್ತಿರುವುದರಿಂದ ಆಶ್ರಮದ ಎಲ್ಲರೂ ಅಲ್ಲಿಗೆನೇ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಜವಾಬ್ದಾರಿಯನ್ನು ಲಕ್ಷ್ಮಣ ಮೇಲೆ ಬಿಟ್ಟು ಹೋಗಿದ್ದಾರೆ. ಆದರೆ ಲಕ್ಷ್ಮಣ ಮಕ್ಕಳಿಗೆ ಊಟ ನೀಡದೇ ಸತಾಯಿಸಿದ್ದಾನೆ.

ಈ ಹಿಂದೆ ಮಾತೇ ಮಹಾದೇವಿ ಇದ್ದಾಗ ಈತನಿಗೆ ಮಾತೇ ಅವರೇ ಇರಲು ಅವಕಾಶ ನೀಡಿದ್ದರು. ಅದಕ್ಕಾಗಿ ಆಶ್ರಮದ ಉಳಿದವರು ಇವನನ್ನು ಏನೂ ಪ್ರಶ್ನೆ ಮಾಡುತ್ತಿರಲಿಲ್ಲ. ಸದ್ಯ ಉಪನಗರ ಪೊಲೀಸರು ಲಕ್ಷ್ಮಣ ಪೂರದಗೆ ವಾರ್ನಿಂಗ್ ಮಾಡಿ ಬಿಟ್ಟಿದ್ದಾರೆ. ಆದರೆ ಆಶ್ರಮದ ಹಿರಿಯರು ಇದರ ಮೇಲೆ ಏನೂ ಕ್ರಮ ಕೈಗೊಳ್ಳುತ್ತಾರೆ ಎಂಬುದು ಶರಣ ಮೇಳ ಮುಗಿದ ಮೇಲೆ ಎಲ್ಲರೂ ಕೂಡಲಸಂಗಮದಿಂದ ವಾಪಸ್ಸಾದ ಮೇಲೆನೇ ಗೊತ್ತಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *