ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದು ಮಾಡಿದ ಬೆನ್ನಲ್ಲೇ ಪಾಕಿಸ್ತಾನವು ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಈಗಾಗಲೇ ಆರ್ಥಿಕತೆ ಕುಸಿದಿದ್ದು ವಿದೇಶಗಳಿಂದ ನೆರವು ಬೇಡುತ್ತಿದೆ. ಈಗ ಭಾರತದ ಜೊತೆ ವ್ಯಾಪಾರವನ್ನು ಸ್ಥಗಿತಗೊಳಿಸುವ ಮೂಲಕ ಪಾಕ್ ತನ್ನ ಆತ್ಮಹತ್ಯೆಗೆ ತಾನೇ ಶರಣಾಗುತ್ತಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ. ಇದನ್ನು ಓದಿ: ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!
ಪಾಕಿಸ್ತಾನ ಈಗ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳಮಟ್ಟಕ್ಕಿಳಿಸುವುದಾಗಿ ಘೋಷಿಸಿದೆ. ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಹೇಳಿಕೊಂಡಿದೆ. ಈ ನಿಟ್ಟಿನ ಪಾಕ್ ತನ್ನ ರಾಯಭಾರಿಯನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳುವುದಾಗಿ ಮತ್ತು ಪಾಕಿಸ್ತಾನದ ಭಾರತೀಯ ರಾಯಭಾರಿಯನ್ನು ಹೊರಹಾಕುವುದಾಗಿ ಘೋಷಿಸಿದೆ. ಈ ಸುದ್ದಿಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಸ್ಥಳೀಯ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಇಸ್ಲಾಮಾಬಾದ್ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಅನೇಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಸಮಿತಿಯು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಇದನ್ನು ಓದಿ: ನೆರೆವೈರಿ ಪಾಕಿಗೆ ಟೊಮೆಟೊ ರಫ್ತು ಮಾಡದಿರಲು ಕೋಲಾರ ರೈತರು ನಿರ್ಧಾರ
ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕೆಳಕ್ಕೆ ಇಳಿಸುವುದು, ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದು ಹಾಗೂ ದ್ವಿಪಕ್ಷೀಯ ವ್ಯವಸ್ಥೆಗಳ ಪರಿಶೀಲನೆ ಮಾಡುವ ನಿರ್ಧಾರವನ್ನು ಪಾಕ್ ಕೈಗೊಂಡಿದೆ. ಜೊತೆಗೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ದೂರು ನೀಡಲು ಮುಂದಾಗಿದೆ.
ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು (ಆಗಸ್ಟ್ 14) ಕೆಚ್ಚೆದೆಯ ಕಾಶ್ಮೀರಿಗಳಿಗೆ ಒಗ್ಗಟ್ಟಿಗೆ ಹಾಗೂ ಅವರ ಸ್ವ-ನಿರ್ಣಯದ ಹಕ್ಕಿಗಾಗಿ ಹೋರಾಟ ಮಾಡುವುದಾಗಿ ಪಾಕ್ ಘೋಷಿಸಿದೆ. ಅಷ್ಟೇ ಅಲ್ಲದೆ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು (ಆಗಸ್ಟ್ 15) ಕಪ್ಪು ದಿನವನ್ನಾಗಿ ಆಚರಿಸುವ ನಿರ್ಣಯ ಕೈಗೊಂಡಿದೆ.
ಎನ್ಎಸ್ಸಿ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು, ಆಂತರಿಕ ಸಚಿವರು (ಗೃಹ ಸಚಿವ), ಶಿಕ್ಷಣ ಸಚಿವರು, ಮಾನವ ಹಕ್ಕುಗಳ ಸಚಿವರು, ಕಾನೂನು ಸಚಿವರು, ಐಎಸ್ಐ ಮತ್ತು ಸೇನಾ ಸಿಬ್ಬಂದಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಈ ನಿರ್ಧಾರದ ಜೊತೆಗೆ ಭಾರತದ ವಿಮಾನಗಳಿಗೆ ತನ್ನ ವಾಯುಸೀಮೆ ಬಳಸಲು ನಿರ್ಬಂಧ ಹೇರಿದೆ.
ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಬಂಧಿತನಾಗಿದ್ದ ಉಗ್ರ, ಮುಂಬೈ ಸ್ಫೋಟ ಪ್ರಕರಣದ ರೂವಾರಿ ಹಫೀಜ್ ಸಯೀದ್ ತಪ್ಪಿತಸ್ಥನೆಂದು ಪಾಕಿಸ್ತಾನದ ಗುಜ್ರನ್ವಾಲಾ ನ್ಯಾಯಾಲಯ ತೀರ್ಪು ನೀಡಿದೆ. ಜೊತೆಗೆ ಈ ಪ್ರಕರಣವನ್ನು ಪಾಕಿಸ್ತಾನದ ಗುಜರಾತ್ಗೆ ವರ್ಗಾಯಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹಫೀಜ್ ಸಯೀದ್ನನ್ನು ಪಾಕಿಸ್ತಾನದ ಅಧಿಕಾರಿಗಳು ಜುಲೈ 17ರಂದು ಬಂಧಿಸಿದ್ದರು. ನಂತರ 7 ದಿನಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಲಾಗಿತ್ತು ಎಂದು ವರದಿಯಾಗಿದೆ.