ಮಂಗಳೂರಿನ ಮುಲ್ಕಿ ಬಳಿ 5 ಕೋಟಿಯ ರಕ್ತಚಂದನ ವಶ- ಆಂಧ್ರ ಲಾರಿಗೆ ತಮಿಳುನಾಡಿನ ಕಾರು ಎಸ್ಕಾರ್ಟ್

Public TV
2 Min Read

ಮಂಗಳೂರು: ರಕ್ತ ಚಂದನ ಮಾರಾಟದ ಖತರ್ನಾಕ್ ಗ್ಯಾಂಗ್ ಒಂದು ಕಡಲ ನಗರಿ ಮಂಗಳೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಬಲೆಗೆ ಬಿದ್ದಿದೆ.ಕೋಟಿ ಕೋಟಿ ಮೌಲ್ಯದ ರಕ್ತ ಚಂದನವನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ ಖದೀಮರು ಇದೀಗ ಕಂಬಿ ಎಣಿಸುತ್ತಿದ್ದಾರೆ. ಸಿನಿಮಾ ಸ್ಟೈಲ್ ನಲ್ಲಿ ಸೇಫಾಗಿ ಆಂಧ್ರದಿಂದ ಮಂಗಳೂರಿಗೆ ತಲುಪಿದ್ದ ಕಳ್ಳರ ಗ್ಯಾಂಗ್ ಮಂಗಳೂರಿನಲ್ಲಿ ಬಲೆಗೆ ಬಿದ್ದಿರೋದಾದ್ರು ಹೇಗೆ ಅನ್ನೋ ಡಿಟೈಲ್ ಸ್ಟೋರಿ ಇಲ್ಲಿದೆ.

ಮಂಗಳೂರು ನಗರದ ಹೊರವಲಯದ ಮುಲ್ಕಿ ಗ್ರಾಮದ ಕಿಲ್ಪಾಡಿ ಎಂಬಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬರೋಬ್ಬರಿ 5 ಕೋಟಿ ಮೌಲ್ಯದ ರಕ್ತಚಂದನ ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೇ ಉಡುಪಿ ಹಾಗೂ ಮಂಗಳೂರು ಅರಣ್ಯ ವಿಚಕ್ಷಣ ದಳಕ್ಕೆ ಮಾಹಿತಿ ಬಂದಿದ್ದು, ಈ ಬಗ್ಗೆ ಗೌಪ್ಯ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ ಅರಣ್ಯ ಇಲಾಖೆ ಟೀಂ ರಕ್ತ ಚಂದನ ವಶಕ್ಕೆ ಪಡೆದು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಆಂಧ್ರ ಪ್ರದೇಶ ದಟ್ಟ ಅರಣ್ಯದಿಂದ ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ತಂದು ಕೇರಳಕ್ಕೆ ಮಾರಾಟ ನಡೆಸಲು ತರುತ್ತಿದ್ದರು. ಈ ಕಳ್ಳ ಸಾಗಾಟದ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದ ಅರಣ್ಯ ಇಲಾಖೆಯ ತಂಡ ದೊಡ್ಡ ಕುಳಗಳನ್ನೇ ಬಲೆಗೆ ಹಾಕಿಕೊಂಡಿದೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

ಆರೋಪಿಗಳು ಸಿನಿಮಾ ಸ್ಟೈಲ್ ನಲ್ಲೇ ರಕ್ತ ಚಂದನ ಸಾಗಾಟ ಮಾಡುತ್ತಿದ್ದು ಯಾರಿಗೂ ಅನುಮಾನ ಬರದಂತೆ ಪ್ಲಾನ್ ಮಾಡಿಕೊಂಡಿದ್ರು. ಆಂಧ್ರ ಪ್ರದೇಶ ನೋಂದಾಣಿಯ ಲಾರಿಯಲ್ಲಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದು, ಲಾರಿಗೆ ತಮಿಳುನಾಡು ನೋಂದಾಣಿ ಕಾರಿನಲ್ಲಿ ಎಸ್ಕಾರ್ಟ್ ಕೊಟ್ಟು ಸಾಗಾಟ ಮಾಡುತ್ತಿದ್ದರು. ಆದ್ರೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಈ ಅಕ್ರಮ ದಂಧೆಯ ವಾಸನೆ ವಾರಗಳ ಹಿಂದೆಯೇ ಸಿಕ್ಕಿದ್ದು ಆರೋಪಿಗಳ ಬರುವಿಕೆಗಾಗಿ ಕಾಯುತ್ತಿದ್ದರು. ಯಾವಾಗ ಕರಾವಳಿಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತಿದ್ದಂತೆ ಲಾರಿಯನ್ನು ಅಡ್ಡಗಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಬೃಹತ್ ಜಾಲವೊಂದನ್ನ ಭೇದಿಸಿದಂತಾಗಿದೆ.ಈ ಜಾಲ ಇನ್ನು ಯಾವ ಮಟ್ಟಕ್ಕೆ ಬೇರು ಬಿಟ್ಟಿದೆ ಅನ್ನೋ ಬಗ್ಗೆ ಅಧಿಕಾರಿಗಳು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ ಒಟ್ಟಿನಲ್ಲಿ ರಕ್ತ ಚಂದನ ಕದ್ದು ಮಾರಾಟ ಮಾಡಲೆತ್ನಿಸಿದ ಆರೋಪಿಗಳು ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *