ಮೇಜರ್ ಪತ್ನಿಯನ್ನು ಮತ್ತೊಬ್ಬ ಮೇಜರ್ ಹತ್ಯೆಗೈದ!

Public TV
2 Min Read

ನವದೆಹಲಿ: ಸೇನಾ ಮೇಜರ್ ಒಬ್ಬರ ಪತ್ನಿಯ ಶವ ದೆಹಲಿಯ ರಸ್ತೆಯೊಂದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೇಜರ್ ಅಮಿತ್ ದ್ವಿವೇದಿ ಪತ್ನಿ ಶೈಲಜಾ ದ್ವಿವೇದಿ (35) ಮೃತದೇಹ ಶನಿವಾರ ಮಧ್ಯಾಹ್ನ ದೆಹಲಿಯ ದೆಹಲಿಯ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ಸಮೀಪದಲ್ಲಿ ಸಿಕ್ಕಿದೆ.

ಶವ ಪತ್ತೆಯಾದ ಆರಂಭದಲ್ಲಿ ಅಪಘಾತದಿಂದ ಶೈಲಾಜ ದ್ವಿವೇದಿ ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಶೈಲಾಜ ಪತಿಗೆ ಪರಿಚಯವಿದ್ದ ಮೇಜರ್ ಒಬ್ಬ ಈ ಕೃತ್ಯ ಎಸಗಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಪ್ರಾಥಮಿಕ ವರದಿಯ ಪ್ರಕಾರ ಶೈಲಜಾ ಅವರು ಅಪಘಾತದಲ್ಲಿ ಮೃತಪಟ್ಟಿಲ್ಲ. ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಲಾಗಿದ್ದು, ಕೊಲೆ ಮಾಡಿರುವ ವ್ಯಕ್ತಿ ಅಮಿತ್ ಹಾಗೂ ಶೈಲಜಾ ಅವರ ಆತ್ಮೀಯ ವ್ಯಕ್ತಿಯಾಗಿದ್ದಾನೆ. ಅಲ್ಲದೇ ಶಂಕಿತ ವ್ಯಕ್ತಿ ಮೇಜರ್ ಆಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡೆಸಿದ್ದಾರೆ. ಸದ್ಯ ಶಂಕಿತ ವ್ಯಕ್ತಿಯ ಸುಳಿವು ಸಿಕ್ಕಿದೆ. ಆದರೆ ಆತನ ಮೊಬೈಲ್ ನಂಬರ್ ಸ್ವೀಚ್ ಆಫ್ ಮಾಡಿಕೊಂಡಿದ್ದಾನೆ ಎಂದು ದೆಹಲಿಯ ನಗರ ಪೊಲೀಶ್ ಜಂಟಿ ಆಯುಕ್ತ ಮಧುಪ್ ತಿವಾರಿ ತಿಳಿಸಿದ್ದಾರೆ.

ನಡೆದಿದ್ದು ಏನು?
ಶೈಲಜಾ ಅವರು ಬೆಳಗ್ಗೆ 10 ಗಂಟೆಗೆ ಬ್ಯಾಸ್ ಆಸ್ಪತ್ರೆಗೆ ಫಿಸಿಯೋಥೆರಫಿ ಅಧಿವೇಶನಕ್ಕೆ ಹೋಗಿಬೇಕಿತ್ತು. ಅಧಿವೇಶನದ ನಂತರ ಶೈಲಜಾ ಅವರನ್ನು ಕರೆದುಕೊಂಡು ಬರಲು ಚಾಲಕ ಆಸ್ಪತ್ರೆಗೆ ಬಂದಿದ್ದನು. ಈ ವೇಳೆ ಶೈಲಜಾ ಅವರು ಅಧಿವೇಶನಕ್ಕೆ ಹಾಜರಾಗಿಲ್ಲ ಎನ್ನುವ ಮಾಹಿತಿ ಪಡೆದ ಚಾಲಕ, ಶೈಲಜಾ ಅವರ ಪತಿ ಮೇಜರ್ ಅಮಿತ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಪತಿಯನ್ನು ಹುಡುಕುತ್ತ ಅಮಿತ್ ಅವರು ಪೆರೆಡ್ ಗ್ರೌಂಡ್ ಕಡೆಗೆ ಹೋಗುತ್ತಾರೆ. ಶೈಲಜಾ ಅವರ ಕುರಿತಾಗಿ ಯಾವುದೇ ಮಾಹಿತಿ ದೊರೆಯದ ಕಾರಣ ಸಂಜೆ 4.30 ಗಂಟೆಗೆ ನಾಪತ್ತೆ ದೂರು ದಾಖಲಿಸಲು ಠಾಣೆಗೆ ಹೋಗುತ್ತಾರೆ. ಈ ವೇಳೆ ಪೊಲೀಸರು ರಸ್ತೆ ಅಪಘಾತದಲ್ಲಿ ಬಿದ್ದಿದ್ದ ಮಹಿಳೆಯ ಶವವನ್ನು ತೋರಿಸುತ್ತಾರೆ. ಈ ಶವವನ್ನು ನೋಡಿದ ಪತಿ ಅಮಿತ್ ಶೈಲಜಾ ಅವರ ಗುರುತು ಹಿಡಿಯುತ್ತಾರೆ.

ಕೊಲೆ ಶಂಕೆ ವ್ಯಕ್ತವಾಗಿದ್ದು ಹೇಗೆ?
ಮಧ್ಯಾಹ್ನ 1.28 ಗಂಟೆಗೆ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಶೈಲಜಾ ರಸ್ತೆಯಲ್ಲೇ ಬಿದ್ದಿದ್ದಾರೆ. ಅಪಘಾತದ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನಾ ಸ್ಥಳದಲ್ಲಿ ಒಂದೇ ವಾಹನ ಪದೇ ಪದೇ ಶೈಲಜಾ ಮೃತ ದೇಹದ ಸುತ್ತ ಹಾದು ಹೋಗಿದ್ದ ಗುರುತುಗಳು ಪೊಲೀಸರಿಗೆ ಸಿಕ್ಕಿದೆ. ಪತಿ ಅಮಿತ್ ಪತ್ನಿಯ ಗುರುತು ಹಿಡಿಯುವವರೆಗೂ ಶೈಲಜಾ ಯಾರು ಎನ್ನುವುದು ಪೊಲೀಸರಿಗೆ ತಿಳಿದಿರಲಿಲ್ಲ. ಮಾಹಿತಿ ಸಿಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಪರಿಚಿತ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ತೀವ್ರ ತನಿಖೆ ಕೈಗೊಂಡ ಪೊಲೀಸರು, ಶೈಲಜಾ ಅವರ ಫೋನ್ ಕರೆ ದಾಖಲೆಗಳನ್ನು ಪರಿಶೀಸಿದಾಗ ಶಂಕಿತ ಆರೋಪಿಯು ಕಿರುಕುಳ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಅಮೀತ್ ದ್ವಿವೇದಿ ಅವರು ನಾಗಾಲ್ಯಾಂಡ್‍ನ ಜಾಕ್ಲೀಸ್ ಯುನಿಟ್‍ನ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪತ್ನಿ ಶೈಲಜಾ ಹಾಗೂ ಆರು ವರ್ಷದ ಮಗನೊಂದಿಗೆ ವಾಸವಾಗಿದ್ದರು. ಎರಡು ತಿಂಗಳ ಹಿಂದಷ್ಟೇ ರಜೆ ಪಡೆದು ದೆಹಲಿಗೆ ಬಂದಿದ್ದರು. ಅಲ್ಲದೇ ಅಮಿತ್ ಅವರನ್ನು ಕೆಲವು ವಾರಗಳ ಮಟ್ಟಿಗೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಸದಸ್ಯರಾಗಿ ಸುಡಾನ್‍ಗೆ ಹೋಗಬೇಕಿತ್ತು.

ಅಪ್‍ಡೇಟ್ ಮಾಹಿತಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಮೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಉತ್ತರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *