ಸೇನೆಯಿಂದ ಪತಿಯ ಪಾರ್ಥಿವ ಶವ ಮನೆಗೆ ಬರುತ್ತಿದ್ದಂತೆ ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ

Public TV
1 Min Read

ರಾಂಚಿ: ಸೇನೆಯಲ್ಲಿ ನಿಧನರಾದ ಪತಿಯ ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ.

ಭಜರಂಗ್ ಭಗತ್(29) ನಿಧನರಾದ ಯೋಧ. ಡಿಸೆಂಬರ್ 29ರಂದು ಯೋಧ ಹಾಸಿಗೆ ಮೇಲಿನಿಂದ ಬಿದ್ದು ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಜನವರಿ 1ರಂದು ಅವರ ಗ್ರಾಮಕ್ಕೆ ತರಲಾಯಿತು. ಈ ವೇಳೆ ಪತ್ನಿ ಮನೀತ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಿಗೆ ಮಾಡಲಾಯಿತು.

ಮನೀತ್ ಹಾಗೂ ಭಜರಂಗ್ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಭಜರಂಗ್ ಅವರ ತಂದೆ ಈ ಮೊದಲೇ ನಿಧನರಾಗಿದ್ದಾರೆ. ಅಲ್ಲದೆ ಅವರಿಗೆ ಐವರು ಸಹೋದರಿಯರಿದ್ದು, ಐವರಿಗೂ ಮದುವೆ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮನೀತ್ ಪೋಷಕರು, ಭಜರಂಗ್ ಅವರ ಸಹೋದರಿ ಹಾಗೂ ಭಾವ ಆತ್ಮಹತ್ಯೆಗೆ ಪ್ರೇರಿಸಿದ್ದಾರೆ. ಹಾಗಾಗಿ ಮನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಕ್ಕಳು ಆಗಿಲ್ಲ ಎಂದು ಭಜರಂಗ್ ಸಹೋದರಿ ಗೀತಾ ಟೀಕಿಸುತ್ತಿದ್ದಳು. ಇದರಿಂದ ಬೇಸರಗೊಂಡ ಮನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾಳೆ.

2012ರಂದು ಭಜರಂಗ್ ಸೇನೆಗೆ ಸೇರಿದ್ದರು. ನಂತರ ಅವರಿಗೆ ನಾಗ್ಪುರದ ರೆಜಿಮೆಂಟಲ್ ಸೆಂಟರ್‍ನ ಯೂನಿಟ್ 17ರಲ್ಲಿ ಗಾರ್ಡ್ ಆಗಿ ನೇಮಿಸಲಾಗಿತ್ತು. ಕಳೆದ ಮೂರು ತಿಂಗಳ ಹಿಂದೆ ಅವರನ್ನು ಜಮ್ಮುವಿನಲ್ಲಿ ಪೋಸ್ಟ್ ಮಾಡಲಾಗಿತ್ತು. ಮಲಗಿದ್ದಾಗ ಹಾಸಿಗೆ ಮೇಲಿಂದ ಬಿದ್ದ ಪರಿಣಾಮ ಭಜರಂಗ್ ನಿಧನರಾಗಿದ್ದಾರೆ ಎಂದು ಯೂನಿಟ್‍ನ ಸಿಓ ಕರ್ನಲ್ ವಿಜಯ್ ಸಿಂಗ್ ಫೋನ್ ಮಾಡಿ ಕುಟುಂಬಸ್ಥರಿಗೆ ತಿಳಿಸಿದ್ದರು.

ಈ ಬಗ್ಗೆ ಭಜರಂಗ್ ಕುಟುಂಬಸ್ಥರು ಮಾತನಾಡಿ, ಡಿಸೆಂಬರ್ 29ರ ರಾತ್ರಿ 10 ಗಂಟೆಗೆ ನಾವು ಭಜರಂಗ್ ಜೊತೆ ಮೊಬೈಲಿನಲ್ಲಿ ಮಾತನಾಡಿದ್ವಿ. ಮರುದಿನ ಬೆಳಗ್ಗೆ ಕರ್ನಲ್ ವಿಜಯ್ ಸಿಂಗ್ ಕರೆ ಮಾಡಿ ಹಾಸಿಗೆಯಿಂದ ಬಿದ್ದ ಪರಿಣಾಮ ಭಜರಂಗ್ ನಿಧನರಾಗಿದ್ದಾರೆ ಅಂತಾ ಹೇಳಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *