ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್

Public TV
2 Min Read

ಮೈಸೂರು: ಲಘು ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಅರ್ಜುನ್ ಜನ್ಯ ಅವರು ಕಳೆದ ಮಂಗಳವಾರ ಅತಿಯಾದ ಗ್ಯಾಸ್‍ಟ್ರಿಕ್ ಪರಿಣಾಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆಗ ಹೃದಯ ಪರೀಕ್ಷೆ ನಡೆಸಿದ್ದಾಗ ಹೃದಯಾಘಾತವಾಗಿರುವುದು ಸ್ಪಷ್ಟವಾಗಿತ್ತು. ಅವರ ಹೃದಯದಲ್ಲಿ ಶೇಕಡಾ 99 ರಷ್ಟು ಬ್ಲಾಕ್ ಇತ್ತು. ಹೀಗಾಗಿ ಮಂಗಳವಾರ ರಾತ್ರಿಯೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು.

ಮೂರು ದಿನಗಳ ಪರೀಕ್ಷೆ ನಂತರ ಇವತ್ತು ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದು ಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಎರಡು ತಿಂಗಳು ಸಿನಿಮಾ ಕೆಲಸ ಹಾಗೂ ರಿಯಾಲಿಟಿ ಶೋ ಗಳಿಂದ ಅರ್ಜುನ್ ಜನ್ಯ ದೂರ ಉಳಿಯಲಿದ್ದಾರೆ.

ಅರ್ಜುನ್ ಅವರ ಆರೋಗ್ಯದ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ್ದ ಅಪೋಲೋ ಹೃದ್ರೋಗ ತಜ್ಞ ಆದಿತ್ಯ ಉಡುಪ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ನಾವು ಅವರಿಗೆ ಚಿಕಿತ್ಸೆ ನೀಡಿದಾಗ ಅವರ ಗ್ಯಾಸ್ಟ್ರಿಕ್ ಸಮಸ್ಯೆ ಸರಿ ಹೋಯಿತು. ಮಂಗಳವಾರ ರಾತ್ರಿ ಮತ್ತೆ ಅವರಿಗೆ ಇಸಿಜಿ ಮಾಡಿಸಿದಾಗ ವರದಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂತು. ಅಲ್ಲದೆ ಅರ್ಜುನ್ ಅವರಿಗೆ ಬೆನ್ನು, ಎದೆ ಹಾಗೂ ತಲೆ ನೋವು ಜಾಸ್ತಿಯಾಗಿತ್ತು. ಹಾಗಾಗಿ ಮತ್ತೆ ಇಸಿಜಿ ಮಾಡಿಸಿದ್ದೇವು ಎಂದಿದ್ದರು.

ಇಸಿಜಿ ವರದಿ ಬಂದಾಗ ಅರ್ಜುನ್ ಅವರ ಬಳಿ ಹೋಗಿ ಆರೋಗ್ಯ ಹೇಗಿದೆ ಎಂದು ಕೇಳಿದ್ದೇವು. ಆಗ ಅವರು ಹೊಟ್ಟೆ ನೋವು ಕಡಿಮೆ ಆಗಿದೆ. ಆದರೆ ತುಂಬಾ ಬೆನ್ನು ಹಾಗೂ ತಲೆ ನೋವು ಇದೆ, ಸ್ವಲ್ಪ ಎದೆ ನೋವಾಗುತ್ತಿದೆ ಎಂದರು. ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಂಡಿದ್ದರಿಂದ ತಕ್ಷಣ ಆಂಜಿಯೋಗ್ರಾಂ ಪರೀಕ್ಷೆ ಮಾಡಿದ್ವಿ. ಆಗಲೇ ಶೇ. 99 ಹಾರ್ಟ್ ಬ್ಲಾಕೇಜ್ ಆಗಿದೆ ಎಂಬುದು ತಿಳಿಯಿತು. ತಕ್ಷಣ ಅವರ ಕುಟುಂಬಸ್ಥರು ಜೊತೆ ಮಾತನಾಡಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಚಿಕಿತ್ಸೆ ನಡೆದ ಅವರು ಸಂಪೂರ್ಣ ನಿರಾಳರಾದರು ಎಂದು ಮಾಹಿತಿ ನೀಡಿದ್ದರು.

ಮಂಗಳವಾರ ಬೆಳಗ್ಗೆ 2.30ಕ್ಕೆ ಅರ್ಜುನ್ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ. ನಿಜವಾಗಿಯೂ 2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವು ಸರಿಯಾಗಿದೆ. ಚಿಕಿತ್ಸೆ ಪಡೆದು ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ. ಸದ್ಯಕ್ಕೆ ಅರ್ಜುನ್ ಜನ್ಯ ಕ್ಷೇಮವಾಗಿದ್ದಾರೆ ಎಂದು ಹೃದ್ರೋಗ ತಜ್ಞ ಆದಿತ್ಯ ಉಡುಪ ಗುರುವಾರ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *