ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

Public TV
2 Min Read

ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಬಗ್ಗೆ ಮೆಲೋಡಿ ಕಿಂಗ್, ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿದ್ದು, ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸಂಗೀತ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಅರ್ಜುನ್ ಜನ್ಯ, ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಸಂದೇಶ ರವಾನಿಸಿದ್ದರು. ವಿಡಿಯೋ ನೋಡಿದ ಬಳಿಕ ಮಾತನಾಡಿದ ರಾಜೇಶ್ ಕೃಷ್ಣನ್, ಇಷ್ಟೆಲ್ಲ ಸಾಧನೆ ಮಾಡಿದ್ದರೂ ಅರ್ಜುನ್ ಜನ್ಯ ಬೆಳೆಯವ ಹುಡುಗ. ಇನ್ನು ಸಾಕಷ್ಟು ಸಾಧನೆ ಮಾಡುವುದು ಬಾಕಿ ಉಳಿದಿದೆ. ಆದಷ್ಟು ಬೇಗ ಗುಣಮುಖರಾಗಿ ಈ ವೇದಿಕೆಗೆ ಬರಲಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಅರ್ಜುನ್ ಜನ್ಯ ವಿಡಿಯೋ ಸಂದೇಶ: ಕಾರಣಾಂತರಗಳಿಂದ ಆರೋಗ್ಯ ತಪ್ಪಿತ್ತು. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಸರಿಗಮಪ ವೇದಿಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ವೇದಿಕೆಗೆ ಬರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಹೀಗೆ ಇರಲಿ. ನನಗೋಸ್ಕರ ಮತ್ತು ನನ್ನ ಕುಟುಂಬಕ್ಕಾಗಿ ಬಹಳಷ್ಟು ಪ್ರಾರ್ಥನೆ ಮಾಡಿದ್ದೀರಿ. ಎಲ್ಲರಿಗೂ ನನ್ನ ಧನ್ಯವಾದಗಳು. ಶೀಘ್ರದಲ್ಲಿಯೇ ಎಲ್ಲರನ್ನು ಭೇಟಿಯಾಗುತ್ತೇನೆ. ಆಯ್ ಆ್ಯಮ್ ಓಕೆ, ನಥಿಂಗ್ ಡೋಂಟ್ ವರಿ ಎಂದು ವಿಡಿಯೋ ಸಂದೇಶವನ್ನು ಅರ್ಜುನ್ ಜನ್ಯ ಕಳುಹಿಸಿದ್ದಾರೆ.

ಅರ್ಜುನ್ ಜನ್ಯರಿಗೆ ಚಿಕಿತ್ಸೆ ನೀಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಹೃದ್ರೋಗ ತಜ್ಞ ಡಾ. ಆದಿತ್ಯ ಉಡುಪ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾದಾಗ ಇಸಿಜಿ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಸಿಜಿ ಮಾಡಿಸಿದಾಗ ಸ್ವಲ್ಪ ಏರುಪೇರಾಗಿರುವ ವಿಷಯ ತಿಳಿಯಿತು. ಇಸಿಜಿಯಲ್ಲಿ ವ್ಯತ್ಯಾಸ ಕಾಣುತ್ತಿದ್ದಂತೆ ಆ್ಯಂಜಿಯೋಗ್ರಾಮ ಮಾಡಿದಾಗ ಹೃದಯ ಶೇ.99ರಷ್ಟು ಬ್ಯಾಕ್ ಆಗಿತ್ತು. ಕೂಡಲೇ ಕುಟುಂಬಸ್ಥರ ಅನುಮತಿ ಪಡೆದು ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು ಎಂದು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.

ಫೆಬ್ರವರಿ 28ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ವೈದ್ಯರು ಎರಡು ತಿಂಗಳು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಸಿನಿಮಾ ಮತ್ತು ಸಂಗೀತ ಕಾರ್ಯಕ್ರಮಗಳಿಂದ ದೂರ ಉಳಿದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *