ಹಂಸಲೇಖ ಕಳಿಸಿದ ಮೆಸೇಜ್‍ನಿಂದ ಸ್ಫೂರ್ತಿ ಬಂತು: ಅರ್ಜುನ್ ಜನ್ಯ

Public TV
2 Min Read

ಬೆಂಗಳೂರು: ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಗುಣಮುಖರಾಗಿ ರಿಯಾಲಿಟಿ ಶೋಗೆ ಕಂ ಬ್ಯಾಕ್ ಮಾಡಿದ್ದಾರೆ. ಅರ್ಜುನ್ ಜನ್ಯ ನೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ ಶೋಗೆ ಎಂಟ್ರಿ ಕೊಟ್ಟಿದ್ದಕ್ಕೆ ಸಂಭ್ರಮಾಚರಣೆಯನ್ನೇ ಮಾಡಿದ್ದಾರೆ.

ಈ ವೇಳೆ ಅರ್ಜುನ್ ಜನ್ಯ ಆಸ್ಪತ್ರೆ ದಿನಗಳನ್ನು ನೆನೆದಿದ್ದು, ನಾನು ಆಸ್ಪತ್ರೆ ಸೇರಿದಾಗ ಎಲ್ಲರೂ ನನ್ನನ್ನು ಮಗನಂತೆ ಕಂಡಿರಿ, ನಾನು ತಂದೆ ಕಳೆದುಕೊಂಡು 25 ರಿಂದ 26 ವರ್ಷಗಳಾಯಿತು. ಆದರೆ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರಲ್ಲಿ ನನ್ನ ತಂದೆಯನ್ನು ನೋಡಿದೆ ಎಂದರು. ಇದಕ್ಕೆ ಅನುಶ್ರೀ ಅವರು ಸ್ನೇಹಿತರಲ್ಲಿ ತಂದೆಯನ್ನು ಕಾಣುವ ನಿಮ್ಮ ಮನಸ್ಸು ನಿಜಕ್ಕೂ ದೊಡ್ಡದು ಎಂದು ಕೊಂಡಾಡಿ, ಚಪ್ಪಾಳೆ ತಟ್ಟಿದರು.

ನೀವು ಈ ಕಾರ್ಯಕ್ರಮಕ್ಕೆ ಬಂದು, ಈ ಚೇರ್ ಮೇಲೆ ಕುಳಿತುಕೊಳ್ಳುವ ವರೆಗೂ ಅವರು ತಮ್ಮ ಚೇರ್‍ನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಮಹಾಗುರುಗಳು ಪಟ್ಟು ಹಿಡಿದಿದ್ದರು. ಅಲ್ಲದೆ ಅರ್ಜುನ್ ಹೇಳಿರುವ ಹಾಗೆ ಸಿಂಹ ಎಲ್ಲಿ ಕುಳಿತುಕೊಂಡರು ಅದು ಸಿಂಹಾಸನವೇ ಎಂಬ ಮಾತನ್ನು ಗಂಭೀರವಾಗಿ ಪರಿಗಣಿಸಿ ಅದೇ ಚೇರ್‍ನಲ್ಲಿ ಕುಳಿತುಕೊಂಡರು. ಅವರ ಚೇರ್‍ನಲ್ಲಿ ಕುಳಿತುಕೊಳ್ಳಲೇ ಇಲ್ಲ. ಇದಕ್ಕೆ ಏನು ಹೇಳುತ್ತೀರಿ ಎಂದು ನಿರೂಪಕಿ ಅನುಶ್ರೀ ಕೇಳಿದರು.

ಇದಕ್ಕೆ ಉತ್ತರಿಸಿದ ಅರ್ಜುನ್ ಜನ್ಯ, ತುಂಬಾ ದಿನ ಲೈಫಲ್ಲಿ ಒಂದು ಸೈಲೆನ್ಸ್ ಇತ್ತು. ಆಗ ಒಳ್ಳೆಯ ವಿಷಯ ತಿಳಿದುಕೊಂಡೆ. ನನಗೆ ಆಪರೇಷನ್ ನಂತರ ಆಸ್ಪತ್ರೆಯಲ್ಲಿದ್ದಾಗ ಏನೇನೋ ನೆನಸಿಕೊಂಡು ತುಂಬಾ ಭಯವಾಗಿತ್ತು. ಭವಿಷ್ಯದ ಬಗ್ಗೆ ನನಗೆ ತುಂಬಾ ಭಯ ಉಂಟಾಗಿತ್ತು. ಬೆಳಗಿನ ಜಾವ ಸುಮಾರು 2-3 ಗಂಟೆಯಾಗಿತ್ತು. ಎಚ್ಚರವಾಗಿ ಭಯಭೀತನಾಗಿ ಕುಳಿತಿದ್ದೆ ಎಂದರು.

ಆಸ್ಪತ್ರೆಯಲ್ಲಿದ್ದಾಗ ಫೋನ್ ಬಳಸದಂತೆ ನನ್ನ ಹೆಂಡತಿ ಮೊಬೈಲ್ ಕೊಟ್ಟಿರಲೇ ಇಲ್ಲ. ಬೆಳಗಿನ ಜಾವ 2-3 ಗಂಟೆಗೆ ಅವಳಿಗೆ ಗೊತ್ತಾಗದಂತೆ ನಾನೇ ಮೊಬೈಲ್ ತೆಗೆದುಕೊಂಡು ನೋಡಿದೆ. ಎಷ್ಟೋಂದು ಮೆಸೇಜ್‍ಗಳಿದ್ದವು ಅದರಲ್ಲಿ ಹಂಸಲೇಖ ಸರ್ ಕಳುಹಿಸಿದ ಮೆಸೇಜ್ ಸಹ ಇತ್ತು. ಒಂದು ವಾಯ್ಸ್ ನೋಟ್ ಕಳುಹಿಸಿದ್ದರು.

ಸುಮ್ಮನೇ ಆನ್ ಮಾಡಿದೆ….ತಕ್ಷಣ, ಯು ಆರ್ ಅರ್ಜುನ್, ಐ ನೌ ವಾಟ್ ಯು ಆರ್, ಐ ನೌ ವಾಟ್ ಇಸ್ ಯುವರ್ ಹಾರ್ಟ್, ಐ ನೌ ಹೌ ಯು ಕ್ಯಾನ್ ಕಂ ಬ್ಯಾಕ್, ಕಂ ಬ್ಯಾಕ್ ಅರ್ಜುನ್, ಕಂ ಬ್ಯಾಕ್….. ಎಂದು ವಾಯ್ಸ್ ನೋಟ್ ಕಳುಹಿಸಿದ್ದರು. ಇದರಿಂದಾಗಿ ನನಗೆ ತುಂಬಾ ಸ್ಫೂರ್ತಿ ಉಕ್ಕಿತು ಎಂದು ಹೇಳಿಕೊಂಡಿದ್ದಾರೆ.

ಈ ವಾಯ್ಸ್ ನೋಟ್ ಕೇಳಿದ ತಕ್ಷಣ ಸಿಕ್ಕಾಪಟ್ಟೆ ಅಳು ಬಂದು, ನಂತರ ಸುಮಾರು ಅರ್ಧ ಗಂಟೆಗಳ ಕಾಲ ನನ್ನಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಯಾಯಿತು ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ. ಇವೆಲ್ಲ ನಮ್ಮ ಲೈಫ್‍ಗೆ ಟ್ರೇಲರ್, ನಾವಿಲ್ಲ ಎಂದರೆ ಯಾವ ರೀತಿಯಾಗುತ್ತದೆ ಎಂಬುದನ್ನು ದೇವರು ಟ್ರೇಲರ್ ತೋರಿಸುತ್ತಾನೆ. ಕೆಲವು ಬದಲಾವಣೆಗಳಿಂದ ಬೆಳವಣಿಗೆಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಲವು ಬೆಳವಣಿಗೆಗೆ ಬದಲಾವಣೆಗಳು ಬೇಕು. ಚಿಕ್ಕ ಬದಲಾವಣೆಯಾಗಿದೆ ಎಂದು ಅರ್ಜುನ್ ಜನ್ಯ ಭಾವುಕರಾದರು.

Share This Article
Leave a Comment

Leave a Reply

Your email address will not be published. Required fields are marked *