ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದ ಬಡ ಮತ್ತು ಮಧ್ಯಮ ವರ್ಗದವರಿಗೆ 4,67,580 ಮನೆಗಳನ್ನು ಕಟ್ಟಿ ಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬೆಂಗಳೂರಿನಲ್ಲಿ ತಿಳಿಸಿದರು.
ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಂದಿರುವ ಚೌಹಾಣ್, ಮಾಧ್ಯಮಗಳ ಜತೆ ಮಾತಾಡಿದರು. ಪ್ರತೀ ಬಡವನಿಗೂ ಮನೆ ಸಿಗಬೇಕು ಅನ್ನೋದು ಮೋದಿಯವರ ಸಂಕಲ್ಪ. ಕಳೆದ ಸೆಪ್ಟೆಂಬರ್ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೆವು, ಅನುದಾನವನ್ನೂ ಕೊಟ್ಟಿದ್ದೆವು. ಈಗ ಮತ್ತೆ ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಟಾರ್ಗೆಟ್ ಹೆಚ್ಚಿಸಲಾಗಿದೆ ಎಂದರು.
ಕೇಂದ್ರವು 4,67,580 ಮನೆಗಳನ್ನು ರಾಜ್ಯದಲ್ಲಿ ಕಟ್ಟಲು ಒಪ್ಪಿಗೆ ಕೊಟ್ಟಿದೆ. ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಅಡಿಕೆ ಬೆಳೆ ಯೋಜನೆಗಳಿಗೂ ಅನುದಾನ ಕೊಡ್ತೇವೆ. ಮೂರೂ ಸಚಿವರೂ ಒಂದಷ್ಟು ಬೇಡಿಕೆ ಕೊಟ್ಟಿದ್ದು, ಆದ್ಯತೆ ಮೇರೆಗೆ ಈಡೇರಿಸಲಾಗುವುದು ಎಂದು ಹೇಳಿದರು.
ಅನುದಾನ ತಾರತಮ್ಯ ಆರೋಪ ಬಗ್ಗೆ ಮಾತಾಡಿದ ಕೇಂದ್ರ ಸಚಿವರು, ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ. ಈಗಾಗಲೇ ಬಿಡುಗಡೆ ಮಾಡಿದ ಅನುದಾನ ಸದ್ಬಳಕೆ ಆಗಲಿ. ರಾಜ್ಯ ಅನುದಾನ ಕೇಳದಿದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಕೆಕೆ ಗೆಸ್ಟ್ಹೌಸ್ನಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ ಅವರು ಶಿವರಾಜ್ ಸಿಂಗ್ ಚೌಹಾಣ್ರನ್ನು ಭೇಟಿ ಮಾಡಿ ಇಲಾಖಾವಾರು ಅನುದಾನ, ಕೇಂದ್ರದ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಉಪಸ್ಥಿತರಿದ್ದರು.