ಚೌಕಿದಾರ್ ಚೋರ್ ಹೇಳಿಕೆಗೆ ಸುಪ್ರೀಂ ಕ್ಷಮೆ ಕೇಳಿದ್ದೇನೆ, ಮೋದಿಗಲ್ಲ: ರಾಹುಲ್ ಗಾಂಧಿ

Public TV
3 Min Read

ನವದೆಹಲಿ: ಚೌಕಿದಾರ್ ಚೋರ್ ಹೇಳಿಕೆ ವಿಚಾರವಾಗಿ ಸುಪ್ರೀಂ ಕೋರ್ಟಿಗೆ ಕ್ಷಮೆ ಕೇಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಗಾಗಲಿ ಕ್ಷಮೆ ಯಾಚಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಚೌಕಿದಾರ್ ಚೋರ್ ಹೈ ಎಂದು ಸುಪ್ರಿಂ ಕೋರ್ಟ್ ತಿಳಿಸಿದೆ ಅಂತ ಭಾಷಣದ ವೇಳೆ ಹೇಳಿದ್ದೆ. ಈ ಸಂಬಂಧ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದೆ. ನನ್ನ ಹೇಳಿಕೆಗೆ ಸುಪ್ರೀಂ ಕೋರ್ಟ್ ಗೆ ಕ್ಷಮೆ ಯಾಚಿಸಿದ್ದೇನೆ. ಆದರೆ ಮೋದಿ ಹಾಗೂ ಬಿಜೆಪಿಗೆ ಕ್ಷಮೆ ಕೇಳಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಅವರ ಹೇಳಿಕೆ ವಿಚಾರವಾಗಿ ಬಿಜೆಪಿ ಮುಖಂಡೆ ಮೀನಾಕ್ಷಿ ಲೇಖಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೊಗೋಯ್, ಸಂಜಯ್ ಕಿಶನ್ ಕೌಲ್, ಜೋಸೆಫ್ ಪೀಠವು ಏಪ್ರಿಲ್ 30ರಂದು ವಿಚಾರಣೆ ನಡೆಸಿ, ರಾಹುಲ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿತ್ತು. ಮೀನಾಕ್ಷಿ ಲೇಖಿ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು.

ಸುಪ್ರೀಂಕೋರ್ಟ್ ಹೆಸರು ಬಳಸಿ ಹೇಗೆ ಹೇಳಿಕೆ ನೀಡಿದ್ರಿ? ರಾಹುಲ್ ನೀಡಿದ್ದ ಹೇಳಿಕೆಯನ್ನು ಸುಪ್ರೀಂಕೋರ್ಟ್ ಎಲ್ಲಿ ಹೇಳಿತ್ತು? ಪ್ರಧಾನಿ ಚೋರ್ ಹೈ ಎಂದು ಸುಪ್ರೀಂಕೋರ್ಟ್ ಯಾವಾಗ ಹೇಳಿದೆ ಎಂದು ನ್ಯಾ. ಗೊಗೋಯ್ ಪ್ರಶ್ನಿಸಿದ್ದರು. ಇದಕ್ಕೆ ಸಿಂಘ್ವಿ ನಾವು ಪೂರ್ಣ ಪ್ರಮಾಣದಲ್ಲಿ ವಿಷಾದ ವ್ಯಕ್ತಪಡಿಸಿದ್ದೇವೆ ಎಂದು ಉತ್ತರಿಸಿದ್ದರು.

ಈ ಉತ್ತರಕ್ಕೆ ಎಲ್ಲಿ ಪೂರ್ಣ ಪ್ರಮಾಣದಲ್ಲಿ ವಿಷಾದ ವ್ಯಕ್ತಪಡಿಸಿದ್ದೀರಿ? ನೀವು ಸಲ್ಲಿಸಿದ ಅಫಿಡವಿಟ್‍ನಲ್ಲಿ ವಿಷಾದವೆಲ್ಲಿದೆ? ತಮ್ಮ ಹೇಳಿಕೆಯಲ್ಲಿ ಬ್ರಾಕೆಟ್‍ನಲ್ಲಿ ವಿಷಾದ ವ್ಯಕ್ತಪಡಿಸಿದ್ದು ಯಾಕೆ ಎಂದು ಗೊಗೋಯ್ ಮರು ಪ್ರಶ್ನೆ ಹಾಕಿದ್ದರು.

ನ್ಯಾ.ಕೌಲ್ ಅವರು ಒಂದು ಪೇಜಿನಲ್ಲಿ ಉದ್ದೇಶ ಇರಲಿಲ್ಲ ಎಂದು ಹೇಳುತ್ತೀರಿ. ಮುಂದಿನ ಪುಟದಲ್ಲಿ ವಿಷಾದ ಇರಲಿ ಎಂದು ಹೇಳುತ್ತೀರಿ. 22 ಪುಟಗಳ ಅಫಿಡವಿಟ್‍ನಲ್ಲಿ ಏನು ಹೇಳುತ್ತಿದ್ದೀರಾ? ಎಲ್ಲರೂ ತಪ್ಪು ಮಾಡುತ್ತಾರೆ ಒಪ್ಪಿಕೊಳ್ಳಿ ಎಂದು ಸೂಚಿಸಿದ್ದರು.

ಈ ವೇಳೆ ಸಿಂಘ್ವಿ ಅಫಿಡವಿಟ್‍ಗಳಲ್ಲಿ `ಕ್ಷಮೆ’ (ಅಪಾಲಜಿ) ಎನ್ನುವ ಪದ ಇಲ್ಲದೇ ಇರುವುದು ದೋಷ. ಡಿಕ್ಷನರಿಯನ್ನು ಚೆಕ್ ಮಾಡಿದ್ದೇನೆ. ವಿಷಾದ (ರಿಗ್ರೆಟ್) ಅಂದರೆ ಕ್ಷಮಾಪಣೆ (ಸಿವಿಲ್ ಅಪಾಲಜಿ) ಎಂದೇ ಅರ್ಥ ಬರುತ್ತುದೆ ಎಂದು ಸಮಜಾಯಿಷಿ ನೀಡಿದ್ದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಕಕ್ಷಿದಾರರು ಏನು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದೇವೆ ಎಂದಾಗ ರಾಜಕೀಯ ಸನ್ನಿವೇಶದಲ್ಲಿ ಚೌಕಿದಾರ್ ಚೋರ್ ಅನ್ನೋ ಪದ ಬಳಸಿದ್ದಾರೆ ಎಂದು ಉತ್ತರ ನೀಡಿದ್ದರು.

ನ್ಯಾ.ಗೊಗೋಯ್, ಪ್ರಸ್ತುತ ಈಗ ಕೊಟ್ಟಿರುವ ಅಫಿಡವಿಟ್ ಅನ್ನು ಸ್ವೀಕೃತಿ ಅಥವಾ ಅಂಗೀಕಾರ ಎಂದು ನಿಮ್ಮ ಕಕ್ಷಿದಾರ ಭಾವಿಸುವಂತಿಲ್ಲ. ಸೋಮವಾರದ ಒಳಗೆ ಅಫಿಡವಿಟ್ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮೆ 6ಕ್ಕೆ ಮುಂದೂಡಿದರು.

ಏನಿದು ಪ್ರಕರಣ?
ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೇಂದ್ರದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಬಂದ ನಂತರ ಚೌಕಿದಾರ್ (ಪ್ರಧಾನಿ ಮೋದಿ) ಕಳ್ಳತನ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ್ದರು.

ರಾಹುಲ್ ಗಾಂಧಿ ಅವರು, ರಫೇಲ್ ಡೀಲ್ ಪ್ರಕರಣದ ಆದೇಶದಲ್ಲಿ ಇಲ್ಲದೆ ಇರುವ ಅಂಶಗಳನ್ನು ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟಿನಲ್ಲಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಿದ್ದರು. ಮೀನಾಕ್ಷಿ ಲೇಖಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಏ.22 ರಂದು ಸ್ಪಷ್ಟನೆ ನೀಡಬೇಕೆಂದು ಸೂಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯೂ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *