ಅಧ್ಯಕ್ಷರೇ ಮಿಸ್ಡ್ ಕಾಲ್ ಮಾಡಿ ಪಕ್ಷಕ್ಕೆ ಸೇರಿ ಎಂದಿದ್ದಾರೆ, ಯಾರು ಬೇಕಾದ್ರೂ ಸೇರಬಹುದು – ಮಾಧುಸ್ವಾಮಿ

Public TV
1 Min Read

– ಅನಿಲ್ ಲಾಡ್ ಸಹ ಪಕ್ಷ ಸೇರಬಹುದು

ಹಾಸನ: ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಸೇರಬಹುದು, ನಮ್ಮ ಅಧ್ಯಕ್ಷರೇ ಮಿಸ್ಡ್ ಕಾಲ್ ಮಾಡಿ ಪಕ್ಷಕ್ಕೆ ಸೇರಿ ಎಂದು ಹೇಳಿದ್ದಾರೆ. ರಾಜಕೀಯ ಪಕ್ಷ ನಮಗೇನು ಮಡಿವಂತಿಕೆ ಇಲ್ಲ. ಹೀಗಾಗಿ ಅನಿಲ್ ಲಾಡ್ ಸಹ ಪಕ್ಷಕ್ಕೆ ಸೇರಬಹುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿಲ್ ಲಾಡ್ ಬಿಜೆಪಿ ಸೇರ್ಪಡೆಯಿಂದ ಬಳ್ಳಾರಿಯಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ. ಅಲ್ಲದೆ, ಮಿಸ್ಡ್ ಕಾಲ್ ನೀಡುವ ಮೂಲಕ ಯಾರೂ ಬೇಕಾದರೂ ಬಿಜೆಪಿ ಸದಸ್ಯತ್ವ ಪಡೆಯಬಹುದು ಎಂದು ಈಗಾಗಲೇ ಅಧ್ಯಕ್ಷರೇ ತಿಳಿಸಿದ್ದಾರೆ. ನಮ್ಮ ನಾಯಕರು ದೊಡ್ಡ ಘೋಷಣೆ ಮಾಡಿಬಿಟ್ಟಿದ್ದಾರೆ. ಅನಿಲ್ ಲಾಡ್ ಸೇರಿದಂತೆ ಯಾರು ಬೇಕಾದರೂ ಬರಬಹುದು ಎಂದು ಆಹ್ವಾನಿಸಿದರು.

ರಾಜಕೀಯ ಪಕ್ಷ ನಮಗೇನು ಮಡಿವಂತಿಕೆ ಇಲ್ಲ. ಬಿಜೆಪಿ ಕೇಡರ್ ಬೇಸ್ ಪಕ್ಷ, ಸಂಘಟನೆಯಿಂದ ಬೆಳೆದು ಬಂದಿರುವ ಪಕ್ಷ. ನಾವೇ ಇದ್ದರೂ ಪಕ್ಷ ಚೆನ್ನಾಗಿರುತ್ತೆ, ಯಾರು ಬಂದರೂ ಪಕ್ಷ ಚೆನ್ನಾಗಿರುತ್ತದೆ. ಬರುವುದರಿಂದ, ಹೋಗುವುದರಿಂದ ಸಂಘಟನೆಯಲ್ಲಿ ವ್ಯತ್ಯಾಸ ಆಗುತ್ತದೆ ಎಂದು ನಾನು ಭಾವಿಸಿಲ್ಲ ಎಂದು ವಿವರಿಸಿದರು.

ಆಯೋಗ ಘೋಷಣೆ ಮಾಡಿದಾಗ ಉಪಚುನಾವಣೆ ನಡೆಯುತ್ತವೆ. ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ಹಾಸನ ನೂತನ ಕೋರ್ಟ್ ಕಟ್ಟಡದ ಉಳಿದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಉದ್ಘಾಟನೆ ಮಾಡುತ್ತೇವೆ. ಕೋರ್ಟ್ ಉದ್ಘಾಟನೆ ರಾಜಕೀಯ ಕಾರಣಕ್ಕೆ ನಿಂತಿಲ್ಲ. ಬಿಜೆಪಿ ವರ್ಸಸ್ ಜೆಡಿಎಸ್ ರಾಜಕೀಯ ಏನಿಲ್ಲ ಎಂದು ಸ್ಪಷ್ಟಪಡಿಸಿದರು.

ಫೋನ್ ಟ್ಯಾಪಿಂಗ್ ಕುರಿತು ಪ್ರತಿಕ್ರಿಯಿಸಿದ ಅವರು, ತನಿಖೆ ನಡೆಯುತ್ತಿರುವಾಗ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಅಲೋಕ್ ಕುಮಾರ್ ವಿಚಾರಣೆ ಇನ್ನೂ ಮುಗಿದಿಲ್ಲ. ಈ ಮಧ್ಯೆ ನಾವು ಕಾಲ್ಪನಿಕವಾಗಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಹೇಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

Share This Article
Leave a Comment

Leave a Reply

Your email address will not be published. Required fields are marked *