– ಚುನಾವಣೆ ಲೋಪವಾಗಿದ್ದರೆ ಪ್ರಕರಣ ಏಕೆ ದಾಖಲಿಸಲಿಲ್ಲ?
– ಚುನಾವಣಾ ಆಯೋಗವನ್ನು ದೂರುವ ಮೊದಲು ಸ್ಪಷ್ಟಪಡಿಸಿ ಎಂದ ಕೇಂದ್ರ ಸಚಿವ
ನವದೆಹಲಿ: ಕಾಂಗ್ರೆಸ್ (Congress) ಚುನಾವಣಾ ಆಯೋಗದ (Election Commission) ಮೇಲೆ ಆರೋಪ ಹೊರಿಸುವ ಮೊದಲು ಕರ್ನಾಟಕ ವಿಧಾನಸಭೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು ಎಂಬುದಕ್ಕೆ ರಾಹುಲ್ ಗಾಂಧಿ ಉತ್ತರಿಸಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸವಾಲು ಹಾಕಿದರು.
ದೆಹಲಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ಚುನಾವಣಾ ಆಯೋಗದ ಲೋಪವಿದೆ’ ಎನ್ನುವುದಾದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಇವಿಎಂಗಳು ಮತ್ತು ಚುನಾವಣಾ ಆಯೋಗ ಕಾರ್ಯ ನಿರ್ವಹಿಸಿದೆ. ಹಾಗಾದರೆ ಕಾಂಗ್ರೆಸ್ನವರು ಹೇಗೆ ಆಯ್ಕೆಯಾದರು ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರ ವಾದ ತರ್ಕಬದ್ಧವಲ್ಲ. 2020ರಲ್ಲಿಯೂ ಆಯ್ಕೆಯಾಗಿದ್ದರು. ಆಗದೇ ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತಿತ್ತು. ಲೋಪವಾಗಿದ್ದರೆ ಈವರೆಗೂ ಏಕೆ ಪ್ರಕರಣ ದಾಖಲಿಸಲಿಲ್ಲ ಮತ್ತು ದಾಖಲೆ ಸಲ್ಲಿಸಲಿಲ್ಲ? ಈಗ ಒಂದು ವರ್ಗವನ್ನು ಸಮಾಧಾನಪಡಿಸಲು ಈ ನಡೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸತ್ನಲ್ಲಿ ಚರ್ಚೆ ಅಸಾಧ್ಯವೆಂದ ಮಾಜಿ ಸ್ಪೀಕರ್:
ಚುನಾವಣಾ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ಸಂಸತ್ತು ಚರ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಲೋಕಸಭೆ ಮಾಜಿ ಸ್ಪೀಕರ್ ಬಲರಾಮ್ ಜಾಖರ್ ತೀರ್ಪಿತ್ತಿದ್ದಾರೆ. ಇನ್ನು, ಸುಪ್ರೀಂ ಕೋರ್ಟ್ನಲ್ಲಿ ಸಹ ವಿಚಾರಣೆ ನಡೆಯುತ್ತಿದ್ದು, ಇದು ಕಾನೂನು ವ್ಯಾಪ್ತಿಗೊಳಪಟ್ಟಿದೆ. ಹಿಂದೆಯೂ ಎಸ್ಐಆರ್ ನಡೆಸಲಾಗಿದೆ. ಆದರೆ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
2023ರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಸಹ ಬಿಜೆಪಿಯೇ ಅಧಿಕಾರದಲ್ಲಿತ್ತು. ಹಾಗಿದ್ದರೂ ಕಾಂಗ್ರೆಸ್ ಬಹುಮತದಿಂದ ಗೆದ್ದಿತು. ಆಗ ಚುನಾವಣಾ ಆಯೋಗ ಮತ್ತು ಇವಿಎಂ ಎಲ್ಲಾ ಚೆನ್ನಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಾಕ್ಷಣ ನಿಮಗೆ ಚುನಾವಣಾ ಆಯೋಗ ಚೆನ್ನಾಗಿಲ್ಲ, ಇವಿಎಂಗಳು ವಿಶ್ವಾಸಾರ್ಹವಲ್ಲ ಅಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಜಗತ್ತಿಗೇನು ಹೇಳಲು ಹೊರಟಿದ್ದೀರಿ?
ಕರ್ನಾಟಕದಲ್ಲಿ ವಿಧಾನಸಭೆ ಫಲಿತಾಂಶ ನಿಮ್ಮ ಪರವಾಗಿತ್ತು. ಆದರೆ ಲೋಕಸಭೆ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಲೋಕಸಭೆ-ವಿಧಾನಸಭೆ ನಿಮ್ಮಂತೆ ಆಗಲಿಲ್ಲ. ದೇಶ ಮತ್ತು ಜಗತ್ತಿಗೆ ಏನನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದೀರಿ? ಭಾರತದಲ್ಲಿ ಚುನಾವಣೆಗಳು ಸರಿಯಾಗಿ ನಡೆಯುವುದಿಲ್ಲ ಎಂದು ಸಾರಲು ಪ್ರಯತ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಜಾರ್ಖಂಡ್, ಜಮ್ಮು-ಕಾಶ್ಮೀರ ಹೇಗೆ ಗೆದ್ದಿರಿ?
ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಸಾಂಸ್ಥಿಕ ಸಂಸ್ಥೆಗಳ ವಿರುದ್ಧ ಮಾತನಾಡುತ್ತಾರೆ. ಚುನಾವಣೆಗಳಲ್ಲಿ ಅಕ್ರಮ ನಡೆದರೆ ನಿಮ್ಮ ಅಭ್ಯರ್ಥಿಗಳು ಜಾರ್ಖಂಡ್ನಲ್ಲಿ ಹೇಗೆ ಗೆದ್ದರು? ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಗೆ ಗೆದ್ದಿದ್ದೀರಿ? ಸ್ವಲ್ಪ ತಾರ್ಕಿಕವಾಗಿ ಕೆಲಸ ಮಾಡಿ, ಜನರು ಬುದ್ಧಿವಂತರಿದ್ದಾರೆ. ಹಾಗಾಗಿಯೇ ತಮ್ಮ ಪಕ್ಷವನ್ನು ವಿಪಕ್ಷದಲ್ಲಿ ಸ್ಥಾನದಲ್ಲಿರಿಸಿದ್ದಾರೆ ಮತ್ತು ಮೂರೇ ಮೂರು ರಾಜ್ಯಗಳಲ್ಲಿ ಆಡಳಿತ ನೀಡಿದ್ದಾರೆ ಎಂದು ರಾಹುಲ್ ಗಾಂಧಿಗೆ ಚಾಟಿ ಬೀಸಿದರು.
ಸುಂಕದಿಂದ ರಾಜತಾಂತ್ರಿಕ ಸಂಬಂಧಕ್ಕಿಲ್ಲ ಧಕ್ಕೆ:
ಕೇವಲ ಸುಂಕ ಏರಿಕೆ, ಬದಲಾವಣೆಯಿಂದ ಭಾರತದ ರಾಜತಾಂತ್ರಿಕ ಸಂಬಂಧ ದುರ್ಬಲವಾಗುವುದಿಲ್ಲ. ಭಾರತದ ಸ್ಥಾನಮಾನವನ್ನು ಜಗತ್ತು ಗುರುತಿಸುತ್ತಿದೆ. 190ಕ್ಕೂ ಹೆಚ್ಚು ದೇಶಗಳ ಬೆಂಬಲವನ್ನು ಭಾರತ ಗಳಿಸಿದೆ ಎಂದು ಸ್ಪಷ್ಟಪಡಿಸಿದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕ ಯೋಜನೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸುಂಕ ನೀತಿಗಳ ಆಧಾರದ ಮೇಲೆ ಅಂತರಾಷ್ಟ್ರೀಯ ಸಂಬಂಧಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಾಗತಿಕವಾಗಿ ಗೌರವಿಸಲ್ಪಟ್ಟಿದೆ ಎಂದು ಪ್ರತಿಪಾದಿಸಿದರು.