ಬೆಂಗಳೂರು: ಸದ್ಯ ರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆ (Anna Bhagya Scheme) ದುಬಾರಿಯಾಗಿದೆ. FCI ಅಕ್ಕಿ ಕೊಡಲು ಒಪ್ಪದ ಕಾರಣ ಅನ್ಯರಾಜ್ಯಗಳ ಮೊರೆ ಹೋಗಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ ಹೇಗಾದರೂ ಅಕ್ಕಿ ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದೆ.
ಪಕ್ಕದ ತೆಲಂಗಾಣದಿಂದಲೂ ರಾಜ್ಯದ ಅಕ್ಕಿ ಬೇಡಿಕೆಗೆ ಪೂರಕ ಸ್ಪಂದನೆ ಸಿಕ್ಕಿಲ್ಲ. ಛತ್ತಿಸ್ಗಢದಲ್ಲಿ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವ ಭರವಸೆಯಷ್ಟೆ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಿದೆ. ಇತ್ತ, ಆಂಧ್ರಪ್ರದೇಶ ಅಕ್ಕಿ ನೀಡುವ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದೆ. ಅಕ್ಕಿ ಸಿಗುವ ಭರವಸೆ ನೀಡಿದ ರಾಜ್ಯಗಳಲ್ಲೇ ನಿಗದಿತ ಪ್ರಮಾಣದ ಅಕ್ಕಿ ಸಿಗುವುದು ಡೌಟ್ ಆಗಿದೆ.
ಎಲ್ಲಾ ಗೊಂದಲಗಳ ನಡುವೆ ಸೋಮವಾರ ಅಕ್ಕಿ ಪಡೆಯಲು ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ. ಯಾವ ರಾಜ್ಯಗಳು ಕರ್ನಾಟಕದ ಅಕ್ಕಿ ಸಮಸ್ಯೆಗೆ ಸ್ಪಂದಿಸಬಹುದು..? ಎಂಬುದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಅಕ್ಕಿ ನೀಡಲು ಸಾಧ್ಯವಿಲ್ಲ ಎಂದ 2 ರಾಜ್ಯಗಳು – ಸರ್ಕಾರಕ್ಕೆ ಮತ್ತಷ್ಟು ತಲೆನೋವು
ರಾಜ್ಯ ಸರ್ಕಾರ ಪ್ರತಿ ಕೆಜಿ ಅಕ್ಕಿಯನ್ನು 36.60 ರೂ.ಗೆ ಪಡೆದು ನಾಡಿನ ಜನರಿಗೆ ನೀಡಲು ಯೋಜನೆ ರೂಪಿಸಿತ್ತು. ಆದ್ರೆ ಕೇಂದ್ರ ಸರ್ಕಾರ ಅಕ್ಕಿ ವಿತರಣೆಗೆ ಬ್ರೇಕ್ ಹಾಕಿದ ನಂತರ ಸರ್ಕಾರಕ್ಕೆ ಈಗ ಖಾಸಗಿ ಮಾರ್ಗವೊಂದೇ ಹಾದಿ ಎಂಬಂತಾಗಿದೆ. 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸಲು ಸರ್ಕಾರಕ್ಕೆ ವಾರ್ಷಿಕ 10 ಸಾವಿರದ 92 ಕೋಟಿ ವೆಚ್ಚ ತಗುಲಲಿದೆ. ಖಾಸಗಿಯಾಗಿ ಕೊಳ್ಳುವುದಾದರೆ ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಪೆಟ್ಟು ಬೀಳಲಿದೆ. ಖಾಸಗಿ ಅಕ್ಕಿ ಕೊಳ್ಳಬೇಕಾದರೆ 2 ರಿಂದ 3 ಸಾವಿರ ಕೋಟಿ ಹೆಚ್ಚುವರಿ ಬಾರ ವಾರ್ಷಿಕವಾಗಿ ಸರ್ಕಾರ ಮೇಲೆ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ಸೋನಾ ಮಸೂರಿ ಅಕ್ಕಿ ಇದ್ದರೂ ಅದರ ವೆಚ್ಚ ಕೆಜಿಗೆ 55 ರೂ ಆಗಲಿದೆ. ಅದನ್ನ ಕೊಂಡು ಅನ್ನ ಭಾಗ್ಯದ ಸ್ಕೀಮ್ ನಲ್ಲಿ ಹಂಚುವುದು ಸರ್ಕಾರದ ಪಾಲಿಗೆ ದುಬಾರಿಯಾಗಲಿದೆ. ಒಟ್ಟಿನಲ್ಲಿ ಸರ್ಕಾರ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೆ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ:ಮಾವಿನ ಹಣ್ಣಿಗಾಗಿ ನಡೆದ ಗಲಾಟೆ- ಸಹೋದರರನ್ನು ಬಡಿದು ಕೊಂದ ದುಷ್ಕರ್ಮಿಗಳು