ಅಂಜನಾದ್ರಿಯ ಅರ್ಚಕರ ಹುದ್ದೆಯ ವಿವಾದಕ್ಕೆ ಮರುಜೀವ

Public TV
1 Min Read

ಕೊಪ್ಪಳ: ಅಂಜನಾದ್ರಿ ಪರ್ವತ ಹನುಮ ಹುಟ್ಟಿದ ಸ್ಥಳವೆಂದು ದೇಶದ್ಯಾಂತ ಪ್ರಖ್ಯಾತಿ ಹೊಂದಿದ ಕ್ಷೇತ್ರ. ಕಳೆದ ಕೆಲ ವರ್ಷಗಳ ಹಿಂದೆ ಅರ್ಚಕರ ಗಲಾಟೆಯಿಂದ ಸಾಕಷ್ಟು ಸುದ್ದಿಯಾಗಿತ್ತು. ಅಲ್ಲದೇ ಅರ್ಚಕನೋರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಅಂಜನಾದ್ರಿಗೆ ಕಪ್ಪು ಚುಕ್ಕೆಯಾಗಿತ್ತು. ಆದರೆ ಇದೀಗ ಮತ್ತೆ ಅಂಜನಾದ್ರಿಯ ಅರ್ಚಕರ ಹುದ್ದೆಗೆ ವಿವಾದ ಆರಂಭವಾಗಿದೆ.

ಅರ್ಚಕರ ಗಲಾಟೆಯಿಂದ ಸುದ್ದಿಯಾಗಿ ನಂತರ ಶಾಂತಗೊಂಡಿದ್ದ ಕೊಪ್ಪಳದ ಅಂಜನಾದ್ರಿ ದೇಗುಲ ಮತ್ತೆ ಅರ್ಚಕ ಹುದ್ದೆ ಸಂಬಂಧ ಸುದ್ದಿಯಲ್ಲಿದೆ. ಅಂಜನಾದ್ರಿ ಹಿಂದಿನ ಅರ್ಚಕರಾದ ವಿದ್ಯಾದಾಸ್ ಇದೀಗ ಅಂಜನಾದ್ರಿಗೆ ನಾನೇ ಅರ್ಚಕ ಎನ್ನುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನ್ಯಾಯಾಲಯ. ಕೆಲವು ದಿನಗಳ ಹಿಂದೆ ಧಾರವಾಡ ಕೋರ್ಟ್ ವಿಭಾಗೀಯ ಪೀಠ ಅಂಜನಾದ್ರಿ ಪರ್ವತಕ್ಕೆ ವಿದ್ಯಾದಾಸ್ ಬಾಬಾ ಅರ್ಚಕರಾಗಿ ಪೂಜಾ ಕೈಂಕರ್ಯ ನಡೆಸಬೇಕು ಅಂತಾ ಆದೇಶಿಸಿತ್ತು. ಆದೇಶದ ಹಿನ್ನೆಲೆ ವಿದ್ಯಾದಾಸ್ ಬಾಬಾ ಅಂಜನಾದ್ರಿ ಪರ್ವತ ಹತ್ತಲು ಸಿದ್ಧವಾಗಿದ್ದರು.

ಮಹಿಳೆಯರೊಂದಿಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆ ವಿದ್ಯಾದಾಸ್ ಬಾಬಾನನ್ನ ಅರ್ಚಕ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಇಷ್ಟಾದರೂ ಕೆಲದಿನಗಳ ಕಾಲ ವಿದ್ಯಾದಾಸ್ ಬಾಬಾ ಅಂಜನಾದ್ರಿ ಪರ್ವತದ ಸಂಸ್ಕೃತ ಪಾಠ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ. ಯಾವಾಗ ಅಂಜನಾದ್ರಿ ಪರ್ವತವನ್ನ ಸರ್ಕಾರ ತನ್ನ ವಶಕ್ಕೆ ತಗೆದುಕೊಳ್ತೋ ಅವತ್ತು ವಿದ್ಯಾದಾಸ್ ಬಾಬಾ ಅಲ್ಲಿಂದ ಕಾಲ್ಕಿತ್ತು ಕೋರ್ಟ್ ಮೆಟ್ಟಿಲೇರಿದ್ದ. ಕೋರ್ಟ್ ನಲ್ಲಿ ಜಯ ಸಿಕ್ಕಿದ್ದರೂ ನಾವು ಬಾಬಾರನ್ನ ಅಂಜನಾದ್ರಿ ಹತ್ತಲು ಬಿಡೋದಿಲ್ಲ ಎಂದು ಗಂಗಾವತಿ ತಹಶೀಲ್ದಾರ್ ವಿರೇಶ್ ಬಿರಾದಾರ ಹೇಳುತ್ತಾರೆ.

ಪ್ರಖ್ಯಾತಿ ಹೊಂದಿರೋ ಅಂಜನಾದ್ರಿ ಪರ್ವತಕ್ಕೆ ವಿದ್ಯಾದಾಸ್ ಬಾಬಾನಂತಹ ಅರ್ಚಕ ಬೇಡ ಅನ್ನೋದು ಸ್ಥಳೀಯರ ಒತ್ತಾಯ. ಅರ್ಧ ಬೆಟ್ಟ ಏರಿ ವಾಪಸ್ ತೆರಳಿದ ವಿದ್ಯಾದಾಸ್ ಬಾಬಾ ಇಂದು ಪೂಜೆ ಸಲ್ಲಿಸ್ತಾರಾ, ಜಿಲ್ಲಾಡಳಿತ ಪೂಜೆಗೆ ಅವಕಾಶ ಮಾಡಿಕೊಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *