ಟಿಕೆಟ್ ನೀಡದ್ದಕ್ಕೆ ರೊಚ್ಚಿಗೆದ್ದು ಕಚೇರಿಯಲ್ಲಿದ್ದ ಕುರ್ಚಿಗಳನ್ನು ಹೊತ್ತೊಯ್ದ ಕೈ ಎಂಎಲ್‍ಎ!

Public TV
1 Min Read

ಮುಂಬೈ: ಲೋಕಸಭಾ ಚುನಾವಣೆಗೆ ಟಿಕೆಟ್ ನೀಡದ್ದಕ್ಕೆ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕರೊಬ್ಬರು ತಾವು ಪಕ್ಷದ ಕಚೇರಿಗೆ ನೀಡಿದ್ದ 300 ಕುರ್ಚಿಗಳನ್ನು ವಾಪಸ್ ಹೊತ್ತುಕೊಂಡು ಹೋದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ.

ಔರಂಗಾಬಾದ್‍ನ ಸಿಲೋಡ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿದ್ದಕ್ಕೆ ಅಲ್ಲಿನ ಶಾಸಕ ಅಬ್ದುಲ್ ಸತ್ತಾರ್ ಎ ನಬಿ ಹಾಗೂ ಅವರ ಬೆಂಬಲಿಗರು ಕಚೇರಿಯಲ್ಲಿದ್ದ 300 ಪ್ಲಾಸ್ಟಿಕ್ ಕುರ್ಚಿಗಳನ್ನು ಹೊತ್ತುಕೊಂಡು ಹೋಗಿದ್ದಾರೆ.

ಸಿಲೋಡ್‍ನಲ್ಲಿರುವ ಕಾಂಗ್ರೆಸ್ ಕಚೇರಿಗೆ ಅಬ್ದುಲ್ ಅವರು 300 ಖುರ್ಚಿಯನ್ನು ದೇಣಿಗೆ ರೂಪದಲ್ಲಿ ನೀಡಿದ್ದರು. ಆದರೆ ಪಕ್ಷ ತನಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದಿದ್ದಾರೆ. ಬಳಿಕ ನನಗೆ ಟಿಕೆಟ್ ಕೊಡದ ಮೇಲೆ ನಾನು ನೀಡಿರುವ ಕುರ್ಚಿ ಕಚೇರಿಯಲ್ಲಿ ಯಾಕಿರಬೇಕು ಎಂದು ಆಕ್ರೋಶಗೊಂಡು ತಮ್ಮ ವಾಹನಕ್ಕೆ ಲೋಡ್ ಮಾಡಿಸಿಬಿಟ್ಟಿದ್ದಾರೆ.

ಟಿಕೆಟ್ ನೀಡದ ಕಾರಣಕ್ಕೆ ಈಗಾಗಲೇ ಅಬ್ದುಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಪತ್ರ ಸಲ್ಲಿಸಿದ್ದು, ಬಿಜೆಪಿ ಸೇರುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಸೇರ್ಪಡೆ ವಿಚಾರ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಅಬ್ದುಲ್ ಅವರ ಮನವೊಲಿಸಿ ಸಿಲೋಡ್ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಒಟ್ಟಿನಲ್ಲಿ ಈ ಬಾರಿ ಅಬ್ದುಲ್ ಅವರು ಚುನಾವಣೆಗೆ ನಿಂತರೂ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಾರೋ ಅಥವಾ ಬಿಜೆಪಿ, ಕಾಂಗ್ರೆಸ್‍ನಿಂದ ನಿಲ್ಲುತ್ತಾರೋ ಇನ್ನುವ ಪ್ರಶ್ನೆ ಸದ್ಯ ಹುಟ್ಟಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *