ವಿಕ್ರಮ್‌ ಗೌಡ ಎನ್‌ಕೌಂಟರ್‌ ಬಳಿಕ ಕೊಡಗಿನಲ್ಲಿ – ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತೀವ್ರ

Public TV
2 Min Read

– 2012ರಿಂದ 2024ರ ವರೆಗೆ ಕೊಡಗು ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆ ಗುರುತು ಹೇಗಿದೆ?

ಮಡಿಕೇರಿ: ನಕ್ಸಲ್‌ ನಾಯಕ ವಿಕ್ರಮ್‌ ಗೌಡ (Vikram Gowda) ಎನ್‌ಕೌಂಟರ್‌ ಬಳಿಕ ಆತನ ಸಹಚರರು ದಿಕ್ಕಾಪಾಲಾಗಿ ಓಡಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆ ತಪ್ಪಿಸಿಕೊಂಡ ನಕ್ಸಲರ ಗುಂಪು ಕೊಡಗು ಜಿಲ್ಲೆಯನ್ನು ಪ್ರವೇಶಿಲಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ನಕ್ಸಲ್‌ ನಿಗ್ರಹ ದಳ (ANF) ಕೊಡಗು ಜಿಲ್ಲೆಯ ಗಡಿಭಾಗ ಸೇರಿದಂತೆ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಕೊಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿದೆ. ಕೊಡಗು ಪೊಲೀಸರು ಇದಕ್ಕೆ ಕೈಜೋಡಿಸಿದ್ದಾರೆ.

ಕೊಡಗು (Kodagu) ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ನಾಕಾಬಂಧಿ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ವಾಹನಗಳನ್ನೂ ತಪಾಸಣೆ ನಡೆಸುತ್ತಿದ್ದಾರೆ. ಜೊತೆಗೆ ನಕ್ಸಲರು ಹಿಂದೆ ಓಡಾಟ ನಡೆಸಿದ್ದ ಸ್ಥಳಗಳಲ್ಲಿಯೂ ಕೊಂಬಿಂಗ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸರಣಿ ಅಪಘಾತ – ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

ಕೊಡಗು ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆ ಗುರುತುಗಳು:
* 2012 ಅಕ್ಟೋಬರ್‌ 29ರ ಸಂಜೆ 5 ಗಂಟೆ ಸುಮಾರಿಗೆ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಪಳಂಗಪ್ಪ ಎಂಬುವವರ ಮನೆಗೆ ಭೇಟಿ ನೀಡಿದ ವಿಕ್ರಮ್ ಗೌಡ, ಆಪ್ತ ಮಹೇಶ್ ಜಾನ್ ಮನೆಯಿಂದ ದವಸ ಧಾನ್ಯ ತೆಗೆದುಕೊಂಡು ಹೋಗಿದ್ದ.

* 2013ರ ಫೆಬ್ರವರಿ 13ರಂದು ಸಂಜೆ 4 ಗಂಟೆ ಸುಮಾರಿಗೆ ಭಾಗಮಂಡಲ ಬಳಿಕ ಚೇರಂಗಾಲ ಗ್ರಾಮದ ಪ್ರಭಾಕರನ್ ಎಸ್ಟೇಟ್ ಹೌಸ್‌ಗೆ ವಿಕ್ರಮ್‌ ಗೌಡ ಭೇಟಿ ನೀಡಿದ್ದ. ಸಹಚರರಾದ ಸುಂದರಿ, ಪ್ರವೀಣ್, ರೂಪೇಶ್ ಜೊತೆಗಿದ್ದರು.

* 2013ರ ಫೆಬ್ರವರಿ 14ರಂದು ಸಂಜೆ 6 ಗಂಟೆ ಸುಮಾರಿಗೆ ವಿರಾಜಪೇಟೆ ಗ್ರಾಮಾಂತರ ವ್ಯಾಪ್ತಿಯ ಕಾಡಿನಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ತಂಡ ಕಾಣಿಸಿಕೊಂಡಿತ್ತು.

* 2013ರ ಮಾರ್ಚ್‌ 12ರಂದು ಸಂಜೆ 4:30ರ ಸುಮಾರಿಗೆ ಪೋನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಗ್ರಾಮದಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ಕಾಣಿಸಿಕೊಂಡಿದ್ರು.

* 2013ರ ಮಾರ್ಚ್‌ 14ರಂದು ಸಂಜೆ 6:30 ಸುಮಾರಿಗೆ ಶ್ರೀಮಂಗಲ ಕಾಡಿನಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ಓಡಾಟ.

* 2014ರ ಮಾರ್ಚ್‌ 3ರಂದು ರಾತ್ರಿ 11:30ರ ಸುಮಾರಿಗೆ ಕೇರಳ ಗಡಿಭಾಗವಾದ ಕುಟ್ಟ ಚೆಕ್‌ಪೋಸ್ಟ್‌ ಬಳಿ ನಕ್ಸಲರ ಓಡಾಟ.

* 2018ರ ಫೆಬ್ರವರಿ 2ರಂದು ಸಂಜೆ 7:30ರ ಸುಮಾರಿಗೆ ಮಡಿಕೇರಿ ತಾಲೂಕಿನ ಕೋಯನಾಡು ಗ್ರಾಮದಲ್ಲಿ ವಿಕ್ರಮ್ ಗೌಡ ಸೇರಿದಂತೆ ಕೆಲ ಸಹಚರರು ಬಂದು ಹೋಗಿದ್ರು. ಇದೇ ವೇಳೆ ದವಸ, ಧಾನ್ಯ ಸಂಗ್ರಹಿಸಿದ್ದರು ಎನ್ನಲಾಗಿತ್ತು.

* 2018ರ ಫೆಬ್ರವರಿ 19ರ ಸುಮಾರಿಗೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ನಾಲಾಡಿ ಗ್ರಾಮಕ್ಕೆ ವಿಕ್ರಮ್ ಗೌಡ ತಂಡ ಭೇಟಿ ನೀಡಿತ್ತು.

* 2024ರ ಮಾರ್ಚ್‌ 16ರಂದು ಸಂಜೆ 6:30ರ ಸುಮಾರಿಗೆ ಕೊಡಗು ದಕ್ಷಿಣ ಕನ್ನಡ ಗಡಿಭಾಗವಾದ ಕುಜಿಮಲೆಗೆ ನಕ್ಸಲ್ ತಂಡ ಭೇಟಿ. ಇದನ್ನೂ ಓದಿ: ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

Share This Article