ಆನೆಗೊಂದಿ ಉತ್ಸವ: ಆಕರ್ಷಕ ಸ್ಥಿರ, ಹಗ್ಗದ ಮಲ್ಲಕಂಬ ಪ್ರದರ್ಶನ

Public TV
1 Min Read

ಕೊಪ್ಪಳ: ಆನೆಗೊಂದಿ ಉತ್ಸವದ ನಿಮಿತ್ತ ಲಕ್ಷ್ಮೇಶ್ವರದ ಕರ್ನಾಟಕ ಅಮೆಚೂರ್ ಮಲ್ಲಕಂಬ ಸಂಸ್ಥೆಯ ವತಿಯಿಂದ ಮಂಗಳವಾರ ಆಕರ್ಷಕ ಮಲ್ಲಕಂಬ ಪ್ರದರ್ಶನ ನಡೆಯಿತು.

ಆನೆಗೊಂದಿ ಉತ್ಸವವು ಇದೇ ಜನವರಿ 09 ಮತ್ತು 10ರಂದು ನಡೆಯಲಿದ್ದು, ಉತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೈಕ್ ಸ್ಟಂಟ್, ಗಾಳಿಪಟ ಉತ್ಸವ, ಕಬಡ್ಡಿ, ವಾಲಿಬಾಲ್, ಸೈಕಲ್ ಜಾಥಾ, ಹಗ್ಗ-ಜಗ್ಗಾಟ, ಕೆಸರು ಗದ್ದೆ ಓಟ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಂಗಳವಾರ ಮಲ್ಲಗಂಬ, ಸ್ಲೋ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.

ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಹಮ್ಮಿಕೊಳ್ಳಲಾದ ಮಲ್ಲಕಂಬ ಪ್ರದರ್ಶನಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಅವರು ಚಾಲನೆ ನೀಡಿದರು. ತುಳಸಗಿ, ಬಾಗಲಕೋಟೆ, ಕಲದಗಿ, ರಾಮಗಿರಿ ಊರುಗಳನ್ನೊಳಗೊಂಡ ಲಕ್ಷ್ಮೇಶ್ವರದ ಕರ್ನಾಟಕ ಅಮೆಚೂರ್ ಮಲ್ಲಕಂಬ ಸಂಸ್ಥೆಯ ವಿದ್ಯಾರ್ಥಿಗಳು ಮಲ್ಲಗಂಬ ಪ್ರದರ್ಶನ ನೀಡಿದರು.

ಹಗ್ಗದ ಮಲ್ಲಕಂಬ ಪ್ರದರ್ಶನದಲ್ಲಿ 37 ಜನ ಬಾಲಕಿಯರು ಹಾಗೂ ಸ್ಥಿರ ಮಲ್ಲಕಂಬ ಪ್ರದರ್ಶನದಲ್ಲಿ 36 ಜನ ಬಾಲಕರು ಪಾಲ್ಗೊಂಡಿದ್ದರು. ಯೋಗ ಸೇರಿದಂತೆ ವಿಭಿನ್ನ ರೀತಿಯಲ್ಲಿ ವ್ಯಾಯಾಮಗಳನ್ನು ಮಾಡುವುದರ ಮೂಲಕ ಸಾರ್ವಜನಿಕರ ಮನ ಸೆಳೆದರು.

ಸ್ಲೋ ಸೈಕಲ್ ರೇಸ್:
ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೇದಿಕೆ ಮುಂಭಾಗದಲ್ಲಿ ಹಮ್ಮಿಕೊಳ್ಳಲಾದ ಸ್ಲೋ ಸೈಕಲ್ ರೇಸ್ ಪಂದ್ಯಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಕರ್ನಾಟಕ ಅಮೆಚರ್ ಮಲ್ಲಕಂಬ, ಲಕ್ಷೆಮ್ಮೆಶ್ವರ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಫ್. ಕೊಡ್ಲಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *