ಬಳ್ಳಾರಿ: ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿರುವ ವಿಚಾರವಾಗಿ ಹೊಸಪೇಟೆ ಕಾರ್ಯಕರ್ತರು ಬಿಜೆಪಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮೋದಿ ಚೋರ್ ಹೈ ಎಂದವರಿಗೆ ಯಾರಿಗೆ ಕೇಳಿ ಟಿಕೆಟ್ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಉಪಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡ ಸಭೆ ಕರೆಯಲಾಗಿತ್ತು. ಪರಿಷತ್ ಸದಸ್ಯ ರವಿ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾದ ಸಭೆಯಲ್ಲಿ ಕಾರ್ಯಕರ್ತರು ನಾಯಕರಿಗೆ ಪ್ರಶ್ನೆಗಳ ಸುರಿಮಳೆಯನ್ನು ಎಸೆದರು. ಅಲ್ಲದೇ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ಪರಿಣಾಮ ಮುಖಂಡ ನಡುವೆ ವಾಗ್ವಾದವೂ ಏರ್ಪಟ್ಟಿತ್ತು.
ಸಭೆ ಆರಂಭವಾಗುತ್ತಿದಂತೆ ಗಲಾಟೆ ಆರಂಭವಾದ ಕಾರಣ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರಿಷತ್ ಸದಸ್ಯ ರವಿ ಕುಮಾರ್ ಸಭೆಯಿಂದ ಹೊರ ನಡೆದರು. ಇದಕ್ಕೂ ಮುನ್ನ ಅಸಮಾಧಾನಿತ ಮುಖಂಡರನ್ನು ಸಮಾಧಾನ ಮಾಡಲು ರವಿ ಕುಮಾರ್ ಹೈರಾಣರಾದರು. ನೂರಾರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಖಂಡರು ಮೌನ ವಹಿಸಿದ್ದು ಕಂಡು ಬಂತು. ಸದ್ಯ ಹೊಸಪೇಟೆಯಲ್ಲಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಪರಿಣಾಮ ಆನಂದ್ ಸಿಂಗ್ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ.