ಪೊಲೀಸರೊಂದಿಗೆ ಹೋದ್ರೂ ತಂದೆಯ ಅಂತಿಮ ದರ್ಶನ ಸಿಗದೆ ಅಮೃತಾ ವಾಪಸ್

Public TV
1 Min Read

– ಮಗನೊಂದಿಗೆ ಕಾರಿನಿಂದ ಇಳಿಯುತ್ತಿದ್ದಂತೆ ಧಿಕ್ಕಾರ

ಹೈದರಾಬಾದ್: ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಕೊನೆಯದಾಗಿ ಅಮೃತಾ ತನ್ನ ತಂದೆಯ ಅಂತಿಮ ದರ್ಶನ ಪಡೆಯಲು ಹೋಗಿದ್ದರು.

ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಈತನ ಅಂತ್ಯಕ್ರಿಯೆ ಸೋಮವಾರ ಗಾಂಧಿನಗರದಲ್ಲಿ ನಡೆದಿದೆ. ಈ ವೇಳೆ ಅಮೃತಾ ತನ್ನ ತಂದೆಯ ಅಂತಿಮ ದರ್ಶನ ಮಾಡಲೆಂದು ಹೋಗಿದ್ದರು. ಆಗ ಮಾರುತಿ ರಾವ್‍ನ ಕೊನೆಯ ವಿಧಿ-ವಿಧಾನಗಳನ್ನು ನಡೆಸಲಾಗುತ್ತಿತ್ತು. ಇದನ್ನೂ ಓದಿ: ‘ಅಮೃತಾ ಅಮ್ಮನ ಬಳಿಗೆ ಬಾ’- ಮಗಳಿಗೆ ಮಾರುತಿ ರಾವ್ ಭಾವನಾತ್ಮಕ ಸಂದೇಶ

ಅಮೃತಾ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯಿದೆ ಎಂಬ ಅನುಮಾನದಿಂದ ಪೊಲೀಸರು ಎಚ್ಚರಿಕೆವಹಿಸಿದ್ದರು. ಹೀಗಾಗಿ ಅಮೃತಾಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಅಮೃತಾ ತನ್ನ ಮಗುವಿನೊಂದಿಗೆ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಮಾರುತಿ ರಾವ್‍ನ ಹತ್ತಾರು ಮಂದಿ ಹಿತೈಷಿಗಳು ಅಮೃತಾರನ್ನು ಸುತ್ತುವರಿದರು. ಅಲ್ಲದೆ ಅನೇಕರು ಅಮೃತಾಗೆ ಧಿಕ್ಕಾರ ಕೂಗಿದರು.

ಅಷ್ಟೇ ಅಲ್ಲದೆ ತಂದೆಯ ಸಾವಿಗೆ ನೀನೇ ಕಾರಣ ಎಂದು ಬೈಯುತ್ತಾ, ಮಾರುತಿ ರಾವ್ ಅಮರವಾಗಿರಲಿ ಎಂದು ಘೋಷಣೆ ಕೂಗಿದರು. ಆದರೂ ಅಮೃತಾ ತಂದೆಯನ್ನು ಹತ್ತಿರದಿಂದ ನೋಡಲು ಮುಂದೆ ಹೋಗುತ್ತಿದ್ದರು. ತಕ್ಷಣ ಅನೇಕ ಮಂದಿ ಆಕೆಯನ್ನು ಅಲ್ಲೇ ತಡೆದರು. ಕೊನೆಗೆ ದೂರದಿಂದಲೇ ತಂದೆಯ ಮುಖವನ್ನು ನೋಡಿ ಪೊಲೀಸರ ಜೊತೆ ಬಂದಿದ್ದ ಕಾರಿನಲ್ಲೇ ಅಮೃತಾ ವಾಪಸ್ ಹೋಗಿದ್ದಾರೆ.

ಮಾರುತಿ ರಾವ್ ಕಿರಿಯ ಸೋದರ ಶ್ರವಣ್ ಮಾರುತಿ ರಾವ್ ನ ಅಂತಿಮ ಕ್ರಿಯೆಯನ್ನು ನೆರವೇರಿಸಿದ್ದಾರೆ. ತಂದೆಯ ಸಾವಿನ ಸುದ್ದಿ ತಿಳಿದ ನಂತರ ಮಾತನಾಡಿದ್ದ ಅಮೃತಾ, ಪ್ರಣಯ್ ಹತ್ಯೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು  ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *