ಪಂಚೆ ಶಲ್ಯ ತೊಟ್ಟು ಶ್ರೀಕೃಷ್ಣನ ದರ್ಶನ ಮಾಡಿದ ಅಮಿತ್ ಶಾ

Public TV
1 Min Read

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದರು.

ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಉಡುಪಿ ಕೃಷ್ಣ ಮಠದ ಇತಿಹಾಸವನ್ನು ವಿವರಿಸಿದರು. 9 ಕಿಂಡಿಗಳ ಮೂಲಕ ದರ್ಶನ ಮಾಡುವಂತೆ ಸೂಚಿಸಿದರು. ಮಹಾಪೂಜೆಯ ಸಂದರ್ಭದಲ್ಲಿ ಶಾ ಬಂದಿದ್ದರಿಂದ ಪಂಚೆ, ಶಲ್ಯ ತೊಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಮಠಕ್ಕೆ ಭೇಟಿ ಕೊಟ್ಟರು.

ಮಹಾಪೂಜೆ ಸಂದರ್ಭದಲ್ಲೇ ಶಾ ಭೇಟಿ ಕೊಟ್ಟು ಕೃಷ್ಣನ ದರ್ಶನ ಮಾಡಿದ್ದು ವಿಶೇಷವಾಗಿತ್ತು. ಶಾ ಜೊತೆ ಬಿ.ಎಸ್ ಯಡಿಯೂರಪ್ಪ, ಮುರಳೀಧರ್ ರಾವ್, ಸಂತೋಷ್, ಶೋಭಾ ಕರಂದ್ಲಾಜೆ, ಸಿ.ಟಿ ರವಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರ್ಯಾಯ ಸ್ವಾಮೀಜಿಯನ್ನು ಅಮಿತ್ ಶಾ ಗೌರವಿಸಿದರು. ವಿದ್ಯಾಧೀಶ ಸ್ವಾಮೀಜಿ ಅವರು ಅಮಿತ್ ಶಾ, ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು. ಕೃಷ್ಣಮಠದ ಕಲಾಕೃತಿ, ಐದು ಲಡ್ಡು ಪ್ರಸಾದ, ಚಕ್ಕುಲಿ, ತೀರ್ಥ ಮಂತ್ರಾಕ್ಷತೆಯನ್ನು ನೀಡಿದರು.

ಈ ಸಂದರ್ಭ ಮಾತನಾಡಿದ ಅಮಿತ್ ಶಾ, ಉಡುಪಿ ಶ್ರೀಕೃಷ್ಣನ ದರ್ಶನ ಮಾಡಿ ಧನ್ಯನಾದೆ. ಬೆಳಗ್ಗೆಯೇ ದರ್ಶನ ಸಿಕ್ಕಿದ್ದು ಸಂತೃಪ್ತಿಯಾಗಿದೆ. ಪರ್ಯಾಯ ಸ್ವಾಮೀಜಿಯ ಭೇಟಿಯೂ ಮನಸ್ಸಿಗೆ ಖುಷಿ ತಂದಿದೆ. ನಿನ್ನೆ ಸಂತರ ಭೇಟಿಯೂ ನನ್ನ ಪಾಲಿಗೆ ಒಲಿದಿತ್ತು ಎಂದು ಹೇಳಿದರು.

ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀ ಮಾತನಾಡಿ, ದೇಶದ ಜನರ ರಾಮ ಮಂದಿರದ ಕನಸು ನನಸು ಮಾಡಿ ಎಂದು ಹೇಳಿದರು. ರಥಬೀದಿಗೆ ತೆರಳಿದ ಶಾ, ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿ ತೆರಳಿದರು.

 

Share This Article
Leave a Comment

Leave a Reply

Your email address will not be published. Required fields are marked *