ಕೆಎಸ್ ಈಶ್ವರಪ್ಪ ವಿರುದ್ಧ ಅಮಿತ್ ಶಾ ಅಸಮಾಧಾನ!

Public TV
1 Min Read

ಹಾವೇರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಬಿಜೆಪಿಯಲ್ಲಿ ಪ್ರಮುಖ ಕುರುಬ ನಾಯಕರಾಗಿರುವ ಈಶ್ವರಪ್ಪ ಅವರು ತಮ್ಮ ಸಮುದಾಯದ ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮಿಗಳನ್ನು ಭೇಟಿ ಮಾಡಿಸದ್ದಕ್ಕೆ ಅಮಿತ್ ಶಾ ಗರಂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾ ಅವರು ತಮ್ಮ ಪ್ರವಾಸದ ಅವಧಿಯಲ್ಲಿ ಮಂಗಳವಾರ ಕಾಗಿನೆಲೆ ಶ್ರೀ ನಿರಂಜನಾನಂದ ಪುರಿಗಳನ್ನು ಭೇಟಿ ಮಾಡಲು ಇಚ್ಛಿಸಿದ್ದರು. ಅಮಿತ್ ಶಾ ಮೂಲ ಮಠಕ್ಕೆ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಇದ್ದರೂ ಶ್ರೀ ಗಳು ಶಾಖಾ ಪೀಠದಲ್ಲೇ ಉಳಿದುಕೊಂಡಿದ್ದರು. ಅಲ್ಲದೇ ಈ ವೇಳೆ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಶ್ರೀಗಳು ಭೇಟಿ ಮಾಡಿದ್ದರು.

ಅಮಿತ್ ಶಾ ಕಾಗಿನೆಲೆ ಪೀಠದಕ್ಕೆ ಭೇಟಿ ನೀಡಿದ್ದ ವೇಳೆ ಪೀಠದ ಕಿರಿಯ ಸ್ವಾಮೀಜಿ ಅಮೋಘ ಸಿದ್ದೇಶ್ವರ ಸ್ವಾಮೀಜಿ, ತಿಂಥಿನಿ ಶಾಖಾಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹಾಗೂ ಬೆಂಗಳೂರಿನ ಕೆಲೊಡಿ ಶಾಖಾ ಮಠದ ಈಶ್ವರಾನಂದ ಪುರಿ ಅವರುಗಳು ಮಾತ್ರ ಗುರುಪೀಠದಲ್ಲಿ ಹಾಜರಿದ್ದರು. ಬಿಜೆಪಿ ಮುಖಂಡರನ್ನು ಕಿರಿಯ ಸ್ವಾಮೀಜಿಗಳು ಬರಮಾಡಿಕೊಂಡರು. ಸುಮಾರು 15 ನಿಮಿಷಗಳ ಕಾಲ ಪೀಠದಲ್ಲಿ ಕಾಲ ಕಳೆದ ಶಾ ಮತ್ತು ಅವರ ತಂಡ, ಮೂವರು ಶ್ರೀಗಳ ಜೊತೆ ಚರ್ಚೆ ನಡೆಸಿದರು.

ಶ್ರೀಗಳು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರಿಂದ ರಾಜ್ಯ ಬಿಜೆಪಿ ನಾಯಕರು ಮುಖಭಂಗಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಅಮಿತ್ ಶಾ ಅವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Share This Article
Leave a Comment

Leave a Reply

Your email address will not be published. Required fields are marked *