ಧಾರವಾಡ ಕಾರ್ಯಕ್ರಮದಲ್ಲೇ ಬಿಎಸ್‍ವೈಗೆ ಅಮಿತ್ ಶಾ ಫೋನ್

Public TV
2 Min Read

ಧಾರವಾಡ: ಸಮಾರಂಭ ನಡೆಯುವಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.

ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಆಯೋಜಿಸಿದ್ದ ಮಲಪ್ರಭಾ ಮುಖ್ಯ ಕಾಲುವೆ ಹಂಚು ಮತ್ತು ಉಪಹಂಚು ಎರಡನೇ ಹಂತದ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಬಿಎಸ್‍ವೈ ಭಾಗವಹಿಸಿದ್ದರು. ಆಗ ಅಮಿತ್ ಶಾ ಅವರು ಕರೆ ಮಾಡಿದ್ದು, ಜನವರಿ 2ರಂದು ರಾಜ್ಯದಲ್ಲಿ ನಡೆಯುವ ರೈತ ಸಮಾವೇಶದ ಕುರಿತು ಚರ್ಚಿಸಿದರು. ಫೋನಿನಲ್ಲಿ ಮಾತನಾಡಿದ ನಂತರ ಕರ್ಯಕ್ರಮದ ಬಗ್ಗೆ ಮಾತನಾಡಿದ ಸಿಎಂ, ಈ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ ಎಂದು ಸಮಾರಂಭದ ವೇದಿಕೆಯಲ್ಲೇ ತಿಳಿಸಿದರು.

ಕಾಲುವೆ ದುರಸ್ಥಿಗೆ ಸಾವಿರ ಕೋಟಿ ರೂ.
ರೈತರಿಗೆ ಅನುಕೂಲಕ್ಕಾಗಿ ಮಲಪ್ರಭಾ ಕಾಲುವೆ ದುರಸ್ಥಿಗೆ 1 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಜನರ ಅಪೇಕ್ಷೆ ತುಂಬಾ ಇದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಒಂದು ಹನಿ ನೀರು ವ್ಯರ್ಥವಾಗದಿರಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಅಧಿಕಾರಿಗಳು ಎಷ್ಟು ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ನಾವು ನೋಡಬೇಕಿದೆ. ಮಲಪ್ರಭಾ ಕಾಲುವೆ ದುರಸ್ತಿಗೆ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗುತ್ತಿಗೆದಾರರೊಂದಿಗೆ ಶಾಮೀಲಾಗದೇ ಕೆಲಸ ಮಾಡಿ. ಈ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಾಮಾಣಿಕರೆಂದು ತೋರಿವಂತೆ ಅಧಿಕಾರಿಗಳುಗೆ ಸಿಎಂ ಎಚ್ಚರಿಕೆ ನೀಡಿದರು.

ಮಹದಾಯಿ ಕುರಿತು ಮಾತನಾಡಿದ ಅವರು, ಮಹದಾಯಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಮಹದಾಯಿ ಕಳಸಾ ಬಂಡೂರಿ ಬಗ್ಗೆ ಕಾಳಜಿಯಿದೆ ಎಂದರು. ಬಿಬಿಎಂಪಿಯಲ್ಲಿ ಅಕ್ರಮ ನಡೆದಿರುವ ಕುರಿತು ಮಾತನಾಡಿದ ಅವರು, ಅಕ್ರಮ ನಡೆದಿರುವ ಕುರಿತು ಆರು ತಿಂಗಳಲ್ಲಿ ವರದಿ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಅಧಿಕಾರಿಗಳಿಗೆ ಇದೊಂದು ಖಡಕ್ ಎಚ್ಚರಿಕೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡುವಾಗ ಅಭಿಮಾನಿಯೊಬ್ಬರು ಕುಡಿದ ಮತ್ತಿನಲ್ಲಿ ರಾಜಾಹುಲಿ, ರಾಜಾಹುಲಿ ಎಂದು ಕೂಗಿದ್ದು ಎಲ್ಲರ ಗಮನ ಸೆಳೆಯಿತು. ರಾಜಾಹುಲಿ ಹೇಳಿಕೆ ಕುರಿತು ಮಾತನಾಡಿದ ಶಾಸಕ ಮುನೇನಕೊಪ್ಪ, ಸಿಎಂ ಯಡಿಯೂರಪ್ಪನವರು ಕೇವಲ ಘರ್ಜಿಸುವ ಹುಲಿ ಅಲ್ಲ. ಅದು ಶಿಖಾರಿ ಆಡುವ ಹುಲಿ, ರೈತರ ಪಾಲಿನ ಆಶಾಕಿರಣ ಎಂದು ಹೊಗಳಿಕೆಯ ಮಾತನಾಡಿದರು.

Share This Article
Leave a Comment

Leave a Reply

Your email address will not be published. Required fields are marked *