ಮಂಡ್ಯ: ಅಪಘಾತದಿಂದ ಗಾಯಗೊಂಡು ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದ ಆಂಬುಲೆನ್ಸ್ ಮಾರ್ಗ ಮಧ್ಯೆ ಕೆಟ್ಟು ನಿಂತ ಘಟನೆ ನಗರದಲ್ಲಿ ನಡೆದಿದೆ.
ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಆಂಬುಲೆನ್ಸ್ ಕೆಟ್ಟು ನಿಲ್ಲುತ್ತಿರುವ ಮೂರನೇ ಪ್ರಕರಣವಾಗಿದೆ. ಸೆಪ್ಟೆಂಬರ್ 17 ರಂದು ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರೋಹಳ್ಳಿ ಬಳಿ ಬೈಕ್ಗಳ ನಡುವೆ ಅಪಘಾತ ಸಂಭವಿಸಿ ತೌಸಿಫ್ ಹಾಗೂ ವಾಸಿಂ ಎಂಬ ಇಬ್ಬರು ಗಾಯಗೊಂಡಿದ್ದರು. ರೋಗಿಯೊಬ್ಬರನ್ನು ಮಿಮ್ಸ್ ಆಸ್ಪತ್ರೆಯಿಂದ ಮೈಸೂರಿಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಇಂಡವಾಳು ಗ್ರಾಮದ ಬಳಿ ಆಂಬುಲೆನ್ಸ್ ಕೆಟ್ಟು ನಿಂತಿತ್ತು. ಸುಮಾರು 20 ನಿಮಿಷಗಳವರೆಗೂ ಕಾದು ನಂತರ ಬೇರೆ ಆಂಬುಲೆನ್ಸ್ ಅನ್ನು ಸ್ಥಳಕ್ಕೆ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.
ಸೆಪ್ಟೆಂಬರ್ 27 ರಂದು ಜ್ವರದಿಂದ ಬಳಲುತ್ತಿದ್ದ 4 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮತ್ತೆ ಆಂಬುಲೆನ್ಸ್ ನಗರದ ಸಮೀಪ ಹೆದ್ದಾರಿಯಲ್ಲಿ ಕೆಟ್ಟು ನಿಂತಿತ್ತು. ಕಾರಣ ಕೇಳಿದರೆ ಎಕ್ಸಲೇಟರ್ ವೈರ್ ಕಟ್ ಆಗಿದ್ದರಿಂದ ಕೆಟ್ಟು ನಿಂತಿದೆ ಎಂದು ಹೇಳಿದ್ದರು.
ಇದೀಗ ಮೂರನೇ ಬಾರಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಕೆಟ್ಟು ನಿಂತಿದೆ. ಆಂಬುಲೆನ್ಸ್ ಕೆಟ್ಟು ನಿಂತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಆಂಬುಲೆನ್ಸ್ಗಳು ಪದೇ ಪದೇ ಈ ರೀತಿ ಕೆಟ್ಟು ನಿಲ್ಲುತ್ತಿರುವುದು ಖಂಡಿಸಿ ಸಾರ್ವಜನಿಕರು ಆಕ್ರೋಷವನ್ನು ವ್ಯಕ್ತ ಪಡಿಸುತ್ತಿದ್ದಾರೆ.