ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಗೆಯಿಂದ ಆಂಬುಲೆನ್ಸ್ ಗೆ ದಾರಿ ಸಿಗದೆ ಪರದಾಟ

Public TV
1 Min Read

– ಕೈ ಕೈ ಮಿಲಾಯಿಸಿದ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯ ಬಳಿ ಕೆಂಪೇಗೌಡ ಜಯಂತಿಯ ಮೆರವಣಿಗೆಯಿಂದಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದ ಆಂಬುಲೆನ್ಸ್ ಕೆಲಕಾಲ ದಾರಿ ಸಿಗದೆ ಪರದಾಡುವಂತಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭಾಗವಹಿಸಿದ್ದ ಮೆರವಣಿಗೆಯಲ್ಲಿ ಸಾವಿರಾರು ಜನರು ಹಾಗೂ ಟ್ರ್ಯಾಕ್ಟರ್‍ಗಳು ಇದ್ದ ಕಾರಣ ಆಂಬುಲೆನ್ಸ್‍ಗೆ ದಾರಿ ಸುಲಭವಾಗಲಿಲ್ಲ. ಆಂಬುಲೆನ್ಸ್ ನಲ್ಲಿ ತಾಯಿ ಮಗು ಆಸ್ಪತ್ರೆಗೆ ಹೋಗಲು ರಸ್ತೆಯಲ್ಲಿ ಕೆಲಕಾಲ ಪರದಾಡುವಂತಾಯಿತು. ನಂತರ ಪೋಲಿಸರು ಆಂಬುಲೆನ್ಸ್ ಗೆ ದಾರಿ ಮಾಡಿಕೊಡಲು ಸಾಕಷ್ಟು ಹರಸಾಹಸಪಟ್ಟರು.

ಜೆಡಿಎಸ್-ಕಾಂಗ್ರೆಸ್ ಗಲಾಟೆ: ಕೇಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆದಿದೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಜಯಂತಿ ವೇಳೆ ವೇದಿಕೆ ಮುಂಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ತಳ್ಳಾಟ ನೂಕಾಟ ನಡೆಸಿ ಗಲಾಟೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಡಾ.ಕೆ.ಸುಧಾಕರ್ ಗನ್‍ಮ್ಯಾನ್ ತಿಮ್ಮಯ್ಯ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿ, ಜೆಡಿಎಸ್ ಕಾರ್ಯಕರ್ತರು ಗನ್ ಮ್ಯಾನ್ ಜೊತೆ ವಾಗ್ವಾದಕ್ಕಿಳಿದಾಗ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ತಕ್ಷಣ ಪೊಲೀಸರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.

Share This Article
Leave a Comment

Leave a Reply

Your email address will not be published. Required fields are marked *