‘ಕನಸಿನ ಮನೆ’ಗೆ ಕಾಲಿಡುವ ಮುನ್ನವೇ ಅಂಬಿ ಅಸ್ತಂಗತ..!

Public TV
1 Min Read

– ಇಂದು ಹಾಲು, ತುಪ್ಪ ಕಾರ್ಯ ಕ್ಯಾನ್ಸಲ್

ಬೆಂಗಳೂರು: ಕನ್ನಡದ ಚಿತ್ರರಂಗದ ದಿಗ್ಗಜ, ಕನ್ವರ್ ಲಾಲ್ ಎಂದೇ ಖ್ಯಾತರಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಈ ಮಧ್ಯೆ ಅವರ ಎಷ್ಟೋ ಕನಸುಗಳು ಕನಸಾಗಿಯೇ ಉಳಿದುಕೊಂಡಿರುವುದು ಬೇಸರದ ಸಂಗತಿಯಾಗಿದೆ.

ದಿವಂಗತ ಅಂಬರೀಶ್ ಅವರು ಬೆಂಗಳೂರಿನ ಜೆ.ಪಿ ನಗರದಲ್ಲಿ ಇದ್ದ ಹಳೇ ಮನೆಯ ನವೀಕರಣ ಮಾಡಿಸುತ್ತಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಅಂಬಿ ಕನಸಿನ ಮನೆಯ ನವೀಕರಣ ಮುಗಿದು ಗ್ರಹಪ್ರವೇಶ ಆಗಬೇಕಿತ್ತು. ಆದರೆ ಅದಕ್ಕೂ ಮೊಲದೇ ಅಂಬಿ ಎಲ್ಲರನ್ನು ಅಗಲಿ ಇಹಲೋಕವನ್ನು ತ್ಯಜಿಸಿದ್ದಾರೆ.

ನಟ ಅಂಬಿ ತಮ್ಮ ಜೀವನದ ಕೊನೆ ಕ್ಷಣದವರೆಗೂ ಈ ಮನೆಯಲ್ಲಿಯೇ ಕಳೆಯಬೇಕು ಎಂದು ನೂರಾರು ಕನಸುಗಳನ್ನು ಕಂಡಿದ್ದರು. ತಾವು ದುಡಿದ ಹಣದಲ್ಲಿ, ತಮಗೆ ಹೇಗೆ ಬೇಕೋ ಹಾಗೆ ಮನೆಯನ್ನು ನವೀಕರಣ ಮಾಡುತ್ತಿದ್ದರು. ಮನೆಯ ಅಲಂಕಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ವಸ್ತುವೂ ಅಂಬರೀಶ್ ಅವರದ್ದೇ ಆಯ್ಕೆಯಾಗಿತ್ತು.

ಹೀಗೆ ನೂರಾರು ಕನಸು ಕಂಡಿದ್ದ ನವೀಕರಣ ಮಾಡುತ್ತಿದ್ದ ಮನೆಯಲ್ಲಿಯೇ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಶನಿವಾರ ರಾತ್ರಿ ಇರಿಸಲಾಗಿತ್ತು. ಅಲ್ಲಿಯೇ ಗಣ್ಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸದ್ಯ ಕನಸಿನ ಮನೆಯಲ್ಲಿ ನೀರವ ಮೌನ ಆವರಸಿಕೊಂಡಿದೆ.

ಹಾಲು, ತುಪ್ಪ ಕ್ಯಾನ್ಸಲ್:
ಇಂದು ಪತ್ನಿ ಸುಮಲತಾ ಮತ್ತು ಮಗ ಅಭಿಷೇಕ ಇಬ್ಬರು ಕಂಠೀರವ ಸ್ಟುಡಿಯೋಗೆ ಹೋಗಿ ಹಾಲು-ತುಪ್ಪ ಬಿಡಬೇಕಿತ್ತು. ಆದರೆ ಇಂದು ಮಂಗಳವಾದ್ದರಿಂದ ಹಾಲು-ತುಪ್ಪ ಬಿಡುವ ಕಾರ್ಯವನ್ನು ರದ್ದು ಮಾಡಿದ್ದಾರೆ. ಕುಟುಂಬಸ್ಥರು ಬಂದು ಸರಳವಾಗಿ ಇಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಹಾಲು-ತುಪ್ಪ ಬಿಟ್ಟ ನಂತರ ಕುಟುಂಬಸ್ಥರು ಶ್ರೀರಂಗಪಟ್ಟಣಕ್ಕೆ ತೆರಳಲಿದ್ದು, ಅಲ್ಲಿ ಅಸ್ಥಿ ವಿಸರ್ಜನೆ ಮಾಡುವ ಸಾಧ್ಯತೆ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *