ಅಮರನಾಥ ಉಗ್ರರ ದಾಳಿಯಲ್ಲಿ ಬದುಕುಳಿದ ಕನ್ನಡಿಗರು

Public TV
1 Min Read

ಕಾರವಾರ/ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಕುಟುಂಬಗಳನ್ನ ಸಿಆರ್‍ಪಿಎಫ್ ರಕ್ಷಣಾ ಸಿಬ್ಬಂದಿ ಜಮ್ಮು ಕಾಶ್ಮೀರದ ಅನಂತ್ ನಾಗ ಜಿಲ್ಲೆಯ ಬಾಟಿಂಗು ಬಳಿ ರಕ್ಷಿಸಿದ್ದಾರೆ.

ಇದೇ ತಿಂಗಳ 5ರಂದು ಕಾರವಾರದ ಎಸ್.ಬಿ.ಎಮ್ ಮ್ಯಾನೇಜರ್ ರತ್ನಾಕರ್ ಹೆಬ್ಬಾರ್, ಮಗ ಉಲ್ಲಾಸ್ ಕುಟುಂಬ ಹಾಗೂ ಶಿರಸಿಯ ಆಶಾ ಹೆಗಡೆ, ನಾಗೇಶ್, ಕುಮಟಾದ ಕೃಷ್ಣ ಗುನಗಿ ಅಮರನಾಥ ಯಾತ್ರೆಗೆ ತೆರಳಿದ್ದರು. ಸೋಮವಾರ ಮುಂಜಾನೆ ಉಗ್ರಗಾಮಿಗಳ ದಾಳಿಗೆ ಒಳಗಾಗಿದ್ದ ಬಾಟಿಂಗು ಮಾರ್ಗವಾಗಿ ತೆರಳುತಿದ್ದಾಗ ಸಿಆರ್‍ಪಿಎಫ್ ಸಿಬ್ಬಂದಿ ಇವರನ್ನ ರಕ್ಷಿಸಿ ಅನಂತ್‍ನಾಗ್‍ನ ಸಿಆರ್‍ಪಿಎಫ್ ಕ್ಯಾಂಪ್ ನಲ್ಲಿ ವಸತಿ ಕಲ್ಪಿಸಿದ್ದಾರೆ. ಯಾತ್ರೆಗೆ ತೆರಳಿದ್ದ ಜಿಲ್ಲೆಯ ಆರು ಜನರು ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ.

ಧಾರವಾಡ ನಗರದ 24 ಯಾತ್ರಿಗಳು ಅಮರನಾಥ ಯಾತ್ರೆಗೆ ತೆರಳಿದ್ದು, ಉಗ್ರರ ದಾಳಿಯ ಬಗ್ಗೆ ಸುದ್ದಿ ತಿಳಿದು ಇವರ ಕುಟುಂಬಗಳು ಆತಂಕಕ್ಕೀಡಾಗಿದ್ದಾರೆ. ಧಾರವಾಡದಿಂದ ಮೂರು ತಂಡಗಳಾಗಿ ಯಾತ್ರೆಗೆ ಹೋಗಿರುವ ಯಾತ್ರಾರ್ಥಿಗಳ ಮೊಬೈಲ್ ರೀಚ್ ಆಗುತ್ತಿಲ್ಲ. ಹೀಗಾಗಿ ಅವರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಸಾಧನಕೇರೆ ನಿವಾಸಿ ಚಂದ್ರಶೇಖರ ಎನ್ನುವವರು ಕಳೆದ ಮೂರು ವರ್ಷಗಳಿಂದ ಈ ಯಾತ್ರೆಗೆ ಹೋಗುತ್ತಿದ್ದಾರೆ. ಈ ಬಾರಿ ನಾಲ್ಕನೇ ಪ್ರವಾಸಕ್ಕೆ ತೆರಳಿದ್ದು, ಅವರೂ ಕೂಡಾ ಯಾತ್ರೆಯ ವೇಳೆ ಸಿಲುಕಿದ್ದಾರೆ. ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಮುಗಿಸಿ ಅನಂತನಾಗ್ ಜಿಲ್ಲೆಗೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದ್ದು, ಅಲ್ಲಿ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಇನ್ನು ಇಲ್ಲಿ ಅವರ ಕುಟುಂಬಸ್ಥರು ಮೊಬೈಲ್ ಕರೆ ಮಾಡಿದ್ದು, ಯಾರ ಫೋನ್ ಕರೆಯೂ ಸಿಗುತ್ತಿಲ್ಲ. ಹಾಗಾಗಿ ಸತತ ಮೊಬೈಲ್ ಸಂಪರ್ಕಕ್ಕೆ ಪ್ರಯತ್ನ ನಡೆದಿದೆ.

ಇದನ್ನೂ ಓದಿ: ಶಿವಭಕ್ತರ ಮೇಲೆ ಉಗ್ರರ ಪೈಶಾಚಿಕ ಕೃತ್ಯ – 7 ಮಂದಿ ಅಮರನಾಥ ಯಾತ್ರಿಕರ ಹತ್ಯೆ

Share This Article
Leave a Comment

Leave a Reply

Your email address will not be published. Required fields are marked *