ನಾನೇನು ವಿಜಯ್‌ ಮಲ್ಯಾನಾ: ಆಸ್ತಿ ಜಪ್ತಿಗೆ ಸಂಜಯ್‌ ರಾವತ್‌ ಕಿಡಿ

Public TV
2 Min Read

ಮುಂಬೈ: ಅಕ್ರಮ ಹಣ ವರ್ಗಾವಣೆ ಕಾನೂನಿನ ಅಡಿಯಲ್ಲಿ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್‌ ರಾವುತ್‌ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ ಜಪ್ತಿ ಮಾಡಿದೆ. ಈ ಕ್ರಮದ ವಿರುದ್ಧ ಸಂಜಯ್‌ ರಾವತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನೇನು ದೇಶ ಬಿಟ್ಟು ಪರಾರಿಯಾಗಿರುವ ವಿಜಯ್‌ ಮಲ್ಯಾ ಅಥವಾ ನೀರವ್‌ ಮೋದಿ ಅಂತಾ ಭಾವಿಸಿದ್ದಾರೆಯೇ ಎಂದು ಇ.ಡಿ ವಿರುದ್ಧ ಸಂಜಯ್‌ ರಾವತ್‌ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ನನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶವಿದೆ: ಮೊಯಿತ್ರಾ

ಇದು ರಾಜಕೀಯ ಸೇಡಿನ ವಿಚಾರವಾಗಿದ್ದರೆ, ಈ ಬಗ್ಗೆ ರಾಜ್ಯಸಭಾ ಅಧ್ಯಕ್ಷರಿಗೆ ಈ ಹಿಂದೆಯೇ ತಿಳಿಸಿದ್ದೆ. ಮಹಾರಾಷ್ಟ್ರ ಸರ್ಕಾರವನ್ನು ಕೆಳಗಿಳಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಇಲ್ಲದಿದ್ದರೆ ನಾನು ಕೇಂದ್ರ ತನಿಖಾ ಸಂಸ್ಥೆಗಳನ್ನು ಎದುರಿಸಬೇಕಾಗುತ್ತದೆ. ಅವರು ಮನೆಗೆ ಬಂದು ಬೆದರಿಕೆ ಹಾಕಿದರು. ನಂತರ ಈ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಕೆಲವು ಹಿರಿಯ ನಾಯಕರು ನನ್ನನ್ನು ಸಂಪರ್ಕಿಸಿದ್ದರು. ಪಕ್ಷವನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಅವರ ಮಾತನ್ನು ನಾನು ನಿರಾಕರಿಸಿದ್ದಕ್ಕೆ, ಕೇಂದ್ರೀಯ ಸಂಸ್ಥೆಗಳ ತನಿಖೆಯನ್ನು ಎದುರಿಸಬೇಕಾಗುತ್ತದೆ ಎಂದು ಧಮ್ಕಿ ಹಾಕಿದ್ದರು. ನೀವು ಹೇಗಾದರೂ ಈ ಸರ್ಕಾರವನ್ನು ಉರುಳಿಸಬೇಕು. ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ನಂತರ ನಾವು ಶಾಸಕರ ಗುಂಪನ್ನು ಮುರಿದು ಸರ್ಕಾರವನ್ನು ರಚಿಸುತ್ತೇವೆ ಎಂದು ಬೆದರಿಸಿದ್ದಾರೆಂದು ರಾವತ್‌ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸುವ ಆನ್‍ಲೈನ್ ಚಾನೆಲ್‍ಗಳಿಗೆ ಅನುರಾಗ್ ಠಾಕೂರ್ ವಾರ್ನಿಂಗ್

ನಾನೇನು ವಿಜಯ್‌ ಮಲ್ಯಾನಾ? ನೀರವ್‌ ಮೋದಿ ಅಥವಾ ಅಂಬಾನಿ, ಅದಾನಿನಾ? ನಾನು ಪುಟ್ಟ ಮನೆಯೊಂದರಲ್ಲಿ ವಾಸವಾಗಿದ್ದೇನೆ. ನನ್ನ ಹುಟ್ಟೂರಿನಲ್ಲಿ ನನಗೆ ಒಂದೇ ಒಂದು ಎಕರೆ ಜಮೀನು ಇಲ್ಲ. ನನ್ನದೇನಿದ್ದರೂ ಕಷ್ಟಪಟ್ಟು ದುಡಿದ ಹಣ. ತನಿಖಾ ಸಂಸ್ಥೆಗೆ ಏನಾದರೂ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಅನಿಸುತ್ತದೆಯೇ? ನೀವು ನನ್ನನ್ನು ಯಾರೊಂದಿಗೆ ಲಿಂಕ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಅವರು ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಅವರು ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲಿ. ನನ್ನನ್ನು ಗುಂಡಿಕ್ಕಿ ಕೊಲ್ಲಲಿ ಅಥವಾ ಜೈಲಿಗೆ ಕಳುಹಿಸಲಿ. ಸಂಜಯ್ ರಾವತ್ ಬಾಳಾಸಾಹೇಬ್ ಠಾಕ್ರೆ ಅವರ ಅನುಯಾಯಿ ಮತ್ತು ಶಿವಸೈನಿಕ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಸತತ 15ನೇ ದಿನ ಏರಿಕೆ – ಪೆಟ್ರೋಲ್, ಡೀಸೆಲ್ 80 ಪೈಸೆ ಏರಿಕೆ

ಸಂಜಯ್‌ ರಾವತ್‌ ಹಾಗೂ ಅವರ ಕುಟುಂಬಕ್ಕೆ ಸೇರಿದ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿರುವ 9 ಕೋಟಿ ಮೌಲ್ಯದ ಭೂಮಿ ಮತ್ತು ಮುಂಬೈನ ದಾದರ್ ಉಪನಗರದಲ್ಲಿರುವ 2 ಕೋಟಿ ಮೌಲ್ಯದ ಫ್ಲ್ಯಾಟ್‌ ಜಪ್ತಿಯಾಗಿವೆ. 1,034 ಕೋಟಿ ಮೌಲ್ಯದ ಮುಂಬೈನ ‘ಪತ್ರಾ ಚಾಲ್’ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾವತ್‌ ಅವರ ಈ ಆಸ್ತಿಗಳನ್ನೂ ಸೇರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *