ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತಸಂಘದಿಂದ ಪರ್ಯಾಯ ರಾಜಕಾರಣ: ಕೋಡಿಹಳ್ಳಿ

Public TV
2 Min Read

ಹಾವೇರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತಸಂಘದಿಂದ ಪರ್ಯಾಯ ರಾಜಕಾರಣ ಮಾಡುತ್ತೇವೆ. ರಾಜ್ಯದಲ್ಲಿ ತತ್ವ ಸಿದ್ಧಾಂತಗಳಿಲ್ಲದ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವ ಪಕ್ಷಗಳಿವೆ ಎಂದು ರಾಜ್ಯ ರೈತಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಾವೇರಿಯಲ್ಲಿ ಮಾತನಾಡಿದ ಚಂದ್ರಶೇಖರ್, ಇದೇ ತಿಂಗಳು 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಪರ್ಯಾಯ ರಾಜಕಾರಣದ ಬಗ್ಗೆ ಘೋಷಣೆ ಮಾಡಲಾಗುವುದು. ಈಗಾಗಲೇ ಮಮತಾ ಬ್ಯಾನರ್ಜಿ, ದೆಹಲಿಯಿಂದ ಎಎಪಿ ಪಕ್ಷದ ಮುಖಂಡರು ಸಂಪರ್ಕ ಮಾಡಿದ್ದಾರೆ. ನಾವು ಯಾರ ಜೊತೆಗೂ ಕೈ ಜೋಡಿಸಬೇಕು ಎಂದೇನಿಲ್ಲ. ಏಪ್ರಿಲ್ 11 ರಂದು ರಾಜ್ಯ ಕೋರ ಕಮಿಟಿ ಸಭೆ ಇದೆ. ಸಾಧಕ ಬಾಧಕಗಳನ್ನು ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಲವ್ ಜಿಹಾದ್ ಕೇಸ್‍ಗೆ ಟ್ವಿಸ್ಟ್ – ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಅಂದ ಯುವತಿ

ನಾವು ಈಗ ಸ್ವತಂತ್ರ್ಯರಾಗಿದ್ದು, ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿದ್ದೇವೆ. ಸಿದ್ಧಾಂತಕ್ಕೆ ದಕ್ಕೆ ಬಾರದಂತೆ ಭ್ರಷ್ಟಾಚಾರ ಮುಕ್ತವಾಗಿ ಚುನಾವಣೆ ಮಾಡುತ್ತೇವೆ ಹಾಗೂ ಗೆಲ್ಲುತ್ತೇವೆ ಕೂಡ. ಬೇರೆಯವರಂತೆ ಇಪ್ಪತ್ತು-ಮೂವತ್ತು ಕೋಟಿ ಹೆಂಡ ಇಟ್ಟುಕೊಂಡು ಚುನಾವಣೆ ಮಾಡುವುದಾದರೆ ನಾವು ಕಳ್ಳರೆ ಆಗಬೇಕಾಗುತ್ತದೆ. ಬೊಮ್ಮಾಯಿಯವರ ಶೇ.40 ರಷ್ಟು ಸರ್ಕಾರಕ್ಕೆ ನಾವು ಪರ್ಯಾಯ ಆಗುತ್ತೇವೆ ಎಂದು ತಿಳಿಸಿದರು.

ಮಾವು ಮಾರಾಟದಲ್ಲಿ ಹಿಂದೂ ಮುಸ್ಲಿಂ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಮನಗರದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಾವು ಉತ್ಪಾದನೆ ಮಾಡಲಾಗುತ್ತದೆ. ಅಲ್ಲಿ ಮಾರುಕಟ್ಟೆ ನಡೆಯುವುದೇ ಮುಸ್ಲಿಮರ ಕೈಯಲ್ಲಿ. ಅವರು ಬೆಲೆ ಸರಿಯಾಗಿ ಕೊಡುವುದಿಲ್ಲ ಅಥವಾ ಮುಸ್ಲಿಮರು ಎನ್ನುವುದು ಒಂದೇ ಟಾರ್ಗೆಟಾ? ಸಿಎಂ ಬೊಮ್ಮಾಯಿಯವರೇ, ಮಾವು ವಾರ್ಷಿಕ ಬೆಳೆ ಈ ಬಾರಿ ಫಸಲು ಕಡಿಮೆ ಇದೆ. ಮಾವಿಗೆ ವೈಜ್ಞಾನಿಕ ದರ ನೀಡಿ. ಮಾವಿನ ದರ ಕಡಿಮೆಯಾದರೆ ಸರ್ಕಾರದವರು ಖರೀದಿ ಮಾಡುತ್ತೀವಿ ಎಂದು ಘೋಷಣೆ ಮಾಡಿ. ಅದು ಬಿಟ್ಟು ಇಂತಹ ಕನಿಷ್ಠವಾದ ಕಾರ್ಯಕ್ರಮಗಳನ್ನು ಮಾಡಬೇಡಿ. ಸರ್ಕಾರ ಜನರ ಸಂಕಷ್ಟಕ್ಕೆ ಪರಿಹಾರ ಸೂಚಿಸಬೇಕೆ ಹೊರತು ನೀವೇ ಸಮಸ್ಯೆ ಸೃಷ್ಟಿ ಮಾಡಿ ಅಲ್ಲೋಲ ಕಲ್ಲೋಲ ಮಾಡಬೇಡಿ ಎಂದು ಗುಡುಗಿದರು. ಇದನ್ನೂ ಓದಿ: ಬೆಳಗಾವಿ ಆರ್‌ಎಸ್‌ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ – ಇನ್ನೊಮ್ಮೆ ಮೋದಿ ಪ್ರಧಾನಿ ಆಗ್ತಾರೆ ಎಂದ ಸಾವಂತ್

ಮನುಷ್ಯ ದ್ವೇಷವನ್ನು ಹುಟ್ಟು ಹಾಕುವುದಾದರೆ ಸರ್ಕಾರವನ್ನು ನೀವೇ ಮಾಡ್ತಾ ಇದ್ದೀರಾ? ಅಥವಾ ವಿರೋಧ ಪಕ್ಷದವರು ಸರ್ಕಾರ ನಡೆಸುತ್ತಿದ್ದರಾ? ಸರ್ಕಾರದ ವಿರುದ್ಧ ಜನರನ್ನು ಸಂಘಟಿಸುವುದು ವಿರೋಧ ಪಕ್ಷದವರ ಕೆಲಸ. ಆದರೆ ಸರ್ಕಾರದವರೇ ಈ ಕೆಲಸಕ್ಕೆ ಇಳಿದುಬಿಟ್ಟಿದ್ದೀರಿ. ವೋಟ್ ಪರ್ಸಂಟೇಜ್ ಹೆಚ್ಚಾಗುತ್ತದೆ ಎಂದೋ? ಇದರಿಂದ ವೋಟ್ ಪರ್ಸಂಟೇಜ್ ಜಾಸ್ತಿ ಆಗುವುದಿಲ್ಲ. ನಿಮ್ಮ ಬಳಿ ಇಂತಹ ಅಜೆಂಡಾಗಳು ಬಹಳ ಇವೆ ಎಂದು ಕೇಳಿದ್ದೇನೆ. ಚುನಾವಣೆ ಬರುವವರೆಗೂ ಇದನ್ನು ಟ್ರಯಲ್ ಮಾಡುತ್ತಾ ಇರುತ್ತೀರಿ ಎಂದು ಕೇಳಿದ್ದೇನೆ ಎಂದು ಟೀಕಿಸಿದರು.

ನಿಮ್ಮ ಪಕ್ಷದ ಮಾನ ಮರ್ಯಾದೆ ಕಡಿಮೆ ಮಾಡಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಿ. ಜನರು ಒಂದು-ಎರಡು ಸುಳ್ಳುಗಳನ್ನು ನಂಬುತ್ತಾರೆ. ಸುಳ್ಳು ಹೇಳುವುದೇ ನಿಮ್ಮ ಜಾಯಮಾನ ಆಗಿಬಿಟ್ರೆ ನಿಮ್ಮನ್ನು ಡಸ್ಟ್ ಬಿನ್‌ಗೆ ಎಸೆದುಬಿಡುತ್ತಾರೆ. ಇದರ ಬಗ್ಗೆ ಬಿಜೆಪಿಯವರಿಗೆ ಎಚ್ಚರಿಕೆ ಇರಲಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *